ಚಿಕ್ಕೋಡಿ: ಚಿಕ್ಕೋಡಿ ಮತ್ತು ಅಂಕಲಿ ಪಟ್ಟಣಗಳಲ್ಲಿ ಬುಧವಾರ ತಡರಾತ್ರಿ ಎರಡು ಎಟಿಎಂ ಒಡೆದ ಕಳ್ಳರು ₹40 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಿದ್ದಾರೆ. ಇನ್ನೊಂದು ಎಟಿಎಂ ಒಡೆಯಲು ವಿಫಲ ಯತ್ನ ನಡೆಸಿದ್ದಾರೆ.
‘ತಾಲ್ಲೂಕಿನ ಅಂಕಲಿ ಪಟ್ಟಣದ ಬಸ್ ನಿಲ್ದಾಣ ಎದುರು ಇರುವ ಎಕ್ಸಿಸ್ ಬ್ಯಾಂಕ್ಗೆ ಕನ್ನ ಹಾಕಿದ ಕಳ್ಳರು, ಸಿಸಿಟಿವಿ ಕ್ಯಾಮೆರಾಗೆ ಕಪ್ಪು ಬಣ್ಣದ ಸ್ಪ್ರೇ ಮಾಡಿ, ಗ್ಯಾಸ್ ಕಟರ್ನಿಂದ ಎಟಿಎಂ ಯಂತ್ರ ಕೊರೆದು ಹಣ ಒಯ್ದಿದ್ದಾರೆ. ಈ ಎಟಿಎಂನಲ್ಲಿ ₹17 ಲಕ್ಷ ಜಮೆ ಮಾಡಲಾಗಿತ್ತು. ನಂತರ ಚಿಕ್ಕೋಡಿಗೆ ಬಂದು, ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂದಿನ ಎಟಿಎಂ ಕೇಂದ್ರದಲ್ಲಿ ₹23 ಲಕ್ಷ ನಗದು ಕದ್ದಿದ್ದಾರೆ. ಸಮೀಪದಲ್ಲೇ ಇರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಎಟಿಎಂಗೂ ನುಗ್ಗಲು ಯತ್ನಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ರಾತ್ರಿ 9ರಿಂದ ನಸುಕಿನ 3ರ ಮಧ್ಯೆ ಕೃತ್ಯ ನಡೆದಿದೆ. ಬಿಳಿ ಬಣ್ಣದ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸಂಚು ರೂಪಿಸಿ, ಮೂರೂ ಕಡೆ ಕನ್ನ ಹಾಕಿದ್ದಾರೆ. ಆರೋಪಿಗಳು ಮಹಾರಾಷ್ಟ್ರದ ಮಿರಜ್ನತ್ತ ಹೋಗಿರುವ ಬಗ್ಗೆ ಸುಳಿವು ಸಿಕ್ಕಿದ್ದು, ತನಿಖೆ ನಡೆಸಲಾಗುವುದು. ವಿಜಯಪುರ ತಾಲ್ಲೂಕಿನ ಶಿವಣಗಿಯಲ್ಲೂ ಸೋಮವಾರ ಇದೇ ಮಾದರಿಯಲ್ಲಿ ಕಳ್ಳತನವಾಗಿತ್ತು. ಅದೇ ತಂಡದಿಂದ ಕೃತ್ಯ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವೇಣುಗೋಪಾಲ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಎಫ್ಎಸ್ಎಲ್, ಶ್ವಾನದಳದಿಂದ ಪರಿಶೀಲನೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.