ಬೆಳಗಾವಿ: 2020ರ ರಸಾಯನ ವಿಜ್ಞಾನ ನೊಬೆಲ್ ಪುರಸ್ಕಾರಕ್ಕೆ ಪಾತ್ರವಾಗಿರುವ ಫ್ರಾನ್ಸ್ನ ಇಮಾನ್ಯುಯೆಲ್ ಶರ್ಪೆಂಟಿಯರ್ ಅವರು ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ‘ಸಿಆರ್ಐಎಸ್ಪಿಆರ್ ಥೆರಪಿಟಿಕ್ ಸಂಶೋಧನಾ ಕೇಂದ್ರ’ದ ಸಿಇಒ ಆಗಿ ಬೆಳಗಾವಿ ಮೂಲದ ಸಮರ್ಥ ಕುಲಕರ್ಣಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆನುವಂಶಿಕ ಕಾಯಿಲೆಗಳನ್ನು ಗುಣಪಡಿಸಲು ‘ಅಣುಗಳನ್ನು ಕತ್ತರಿಸುವ’ ವಿಧಾನದಅಭಿವೃದ್ಧಿಗಾಗಿ ಶರ್ಪೆಂಟಿಯರ್ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅವರ ಸಂಸ್ಥೆಯ ಪ್ರಯೋಗಾಲಯದಲ್ಲಿ ಸಮರ್ಥ 2015ರಿಂದ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಸಿಬಿಒ (ಚೀಫ್ ಬ್ಯಸಿನೆಸ್ ಅಧಿಕಾರಿ) ಆಗಿದ್ದ ನಂತರ ಸಿಇಒ ಆಗಿ ಬಡ್ತಿ ಪಡೆದಿದ್ದಾರೆ. ಸದ್ಯ ಅಮೆರಿಕದಲ್ಲಿದ್ದಾರೆ.
ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆ, ಜಿಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಖರಗ್ಪುರ್ ಐಐಟಿಯಿಂದ ಬಯೊಟೆಕ್ನಾಲಜಿ ವಿಷಯದಲ್ಲಿ ಬಿ.ಟೆಕ್. ಪದವಿ, ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಬಯೋಎಂಜಿನಿಯರಿಂಗ್ ಹಾಗೂ ನ್ಯಾನೊ ಟೆಕ್ನಾಲಜಿ ವಿಷಯದಲ್ಲಿ ಪಿಎಚ್.ಡಿ ಪದವಿ ಗಳಿಸಿದ್ದಾರೆ. ಬಯೊಲಾಜಿಕಲ್ ಡ್ರಗ್ಸ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
‘ನೊಬೆಲ್ ಪುರಸ್ಕಾರಕ್ಕೆ ಪಾತ್ರವಾದ ಸಾಧಕಿಯ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಸಾಧಕಗೆ ಅಭಿನಂದನೆಗಳು’ ಎಂದು ಟ್ವಿಟರ್ನಲ್ಲಿ ಇಲ್ಲಿನ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಸಮರ್ಥ, ‘ನನ್ನನ್ನು ಅಭಿನಂದಿಸಿದ ಬೆಳಗಾವಿಯ ಎಲ್ಲರಿಗೂ ಧನ್ಯವಾದಗಳು. ಅಣುಗಳನ್ನು ಕತ್ತರಿಸುವ ತಂತ್ರಜ್ಞಾನದಿಂದ ಔಷಧಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಮತ್ತಷ್ಟು ಶ್ರಮಿಸುತ್ತೇವೆ’ ಎಂದು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.