ADVERTISEMENT

ಬೆಳಗಾವಿ | ಆಟೊದಲ್ಲೇ ಪ್ರೇಮಿಗಳ ಸಾವು: ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 9:06 IST
Last Updated 1 ಜುಲೈ 2025, 9:06 IST
   

ಬೆಳಗಾವಿ: ಯರಗಟ್ಟಿ ಸಮೀಪದಲ್ಲಿರುವ, ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ‍ಪ್ರೇಮಿಗಳು ಆಟೊ ರಿಕ್ಷಾದಲ್ಲಿಯೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.

ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದವರಾದ ರಾಘವೇಂದ್ರ ನಾರಾಯಣ ಜಾಧವ (28) ಹಾಗೂ ರಂಜಿತಾ ಅಡಿವೆಪ್ಪ ಚೌಬಾರಿ (25) ಸಾವಿಗೀಡಾದವರು. ಹಿರೇನಂದಿ ಗ್ರಾಮವು ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮಕ್ಕೆ ಹೊಂದಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ಸತ್ತಿಗೇರಿ ಗ್ರಾಮಸ್ಥರಿಗೆ ವಿಷಯ ಗೊತ್ತಾಗಿದೆ. ಪ್ರೇಮಿಗಳು ಸೋಮವಾರ ರಾತ್ರಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ರಾಘವೇಂದ್ರ ಹಾಗೂ ರಂಜಿತಾ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಚೆಗೆ ರಂಜಿತಾ ಅವರಿಗೆ ಬೇರೊಬ್ಬ ಹುಡುಗನ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಆಟೊದ ಮೇಲಿನ ಕಬ್ಬಿಣ ಸಲಾಖೆಗೆ ಹಗ್ಗ ಕಟ್ಟಿದ್ದು, ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟಂಥ ಸ್ಥಿತಿಯಲ್ಲಿ ಪತ್ತೆಯಾಗಿವೆ.

‘ನಮ್ಮ ಸಹೋದರ ಪ್ರೀತಿಯ ವಿಚಾರವಾಗಿ ಮನೆಯಲ್ಲಿ ಏನೂ ಹೇಳಿಲ್ಲ. ಅವನು ಆಟೊ ಓಡಿಸುತ್ತಿದ್ದ. ಸೋಮವಾರ ಮಧ್ಯಾಹ್ನ ಆಟೊ ತೆಗೆದುಕೊಂಡು ಕೆಲಸಕ್ಕೆ ಹೋದವನು ಮತ್ತೆ ಮನೆಗೆ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಪೊಲೀಸರು ವಿಷಯ ತಿಳಿಸಿದಾಗಲೇ ಘಟನೆ ಗೊತ್ತಾಗಿದೆ. ಚಿಕ್ಕ ಆಟೊದಲ್ಲಿಯೇ ಇಬ್ಬರೂ ಹಗ್ಗದಿಂದ ನೇಣು ಹಾಕಿಕೊಂಡ ರೀತಿ ಪತ್ತೆಯಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ. ಪೊಲೀಸರು ತನಿಖೆ ಮಾಡಬೇಕು’ ಎಂದು ರಾಘವೇಂದ್ರ ಅವರ ಸಹೋದರ ಸೋಮನಾಥ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ಪರಿಶಿಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.