ಅತ್ಯಾಚಾರಕ್ಕೆ ಗಲ್ಲು
ಬೆಳಗಾವಿ: ರಾಯಬಾಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಭರತೇಶ ರಾವಸಾಬ್ ಮಿರ್ಜಿ(28) ಎಂಬಾತನಿಗೆ ಇಲ್ಲಿನ ಜಿಲ್ಲಾ ಪೋಕ್ಸೊ ನ್ಯಾಯಾಲಯ ಗಲ್ಲು ಶಿಕ್ಷೆ ಮತ್ತು ₹45 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಬಾಲಕಿಯ ಪಾಲಕರಿಗೆ ₹10 ಲಕ್ಷ ಪರಿಹಾರ ಘೋಷಿಸಿದೆ.
2019ರ ಅಕ್ಟೋಬರ್ 15ರಂದು ಬಾಲಕಿ ಮನೆಯಿಂದ ಚಾಕೊಲೇಟ್ ತರಲು ಅಂಗಡಿಗೆ ಹೋಗಿದ್ದಳು. ಮರಳುವಾಗ ಭರತೇಶ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅವಳು ಕಿರುಚಾಡಿದಾಗ ಕುತ್ತಿಗೆ ಹಿಸುಕಿ ಸಾಯಿಸಿದ್ದ. ಸಾಕ್ಷ್ಯ ನಾಶಪಡಿಸಲು 20 ಕೆಜಿ ತೂಕದ ಕಲ್ಲನ್ನು ಬಾಲಕಿ ದೇಹಕ್ಕೆ ಕಟ್ಟಿ, ತನ್ನ ಮನೆ ಬಳಿಯ ತೆರೆದ ಬಾವಿಗೆ ಎಸೆದಿದ್ದ. ಬಾಲಕಿ ಕಾಣೆಯಾದ ಬಗ್ಗೆ ಪಾಲಕರು ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೆ.ಎಸ್.ಉಪ್ಪಾರ, ಬೆಳಗಾವಿಯಿಂದ ಶ್ವಾನದಳ ಕರೆಯಿಸಿ ಬಾಲಕಿ ಚಲನ–ವಲನ ಪತ್ತೆ ಮಾಡಿದ್ದರು. ಮನೆಯಲ್ಲಿನ ಆಕೆ ಬಟ್ಟೆಗಳ ವಾಸನೆ ಗ್ರಹಿಸಿದ ಶ್ವಾನಗಳು, ತೆರೆದಬಾವಿ ಬಳಿ ಬಂದವು. ಕೊಳವೆಬಾವಿ ದುರಸ್ತಿಗೆ ಬಳಸುತ್ತಿದ್ದ ಕ್ಯಾಮೆರಾ ಬಾವಿಗೆ ಇಳಿಸಿದಾಗ ಬಾಲಕಿಯ ಬೆರಳು ಕಾಣಿಸಿದ್ದವು. ನೀರು ಖಾಲಿ ಮಾಡಿ, ಬಾಲಕಿ ದೇಹ ತೆಗೆಯಲಾಗಿತ್ತು. ಬಾಲಕಿ ಸೊಂಟಕ್ಕೆ ಸೀರೆಯಿಂದ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದು ಗೊತ್ತಾಗಿತ್ತು.
ಡಾ.ಕೆ.ಎಸ್.ಗುರುದತ್ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಸಿದರು. ಮುಂದಿನ ತನಿಖಾಧಿಕಾರಿಗಳಾದ ಎನ್.ಮಹೇಶ ಮತ್ತು ಕೆ.ಎಸ್.ಹಟ್ಟಿ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ತೀರ್ಪು ಪ್ರಕಟಿಸಿದ್ದಾರೆ.
ವಿವಿಧ ಸೆಕ್ಷನ್ಗಳಡಿ ದಂಡ, ಸಜೆ ವಿಧಿಸಿ ಆದೇಶ ನೀಡಿದ್ದಾರೆ.
ದಂಡ ಪಾವತಿಗೆ ತಪ್ಪಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ತೆಯ ಪೋಷಕರಿಗೆ ₹10 ಲಕ್ಷ ಪರಿಹಾರ ಒದಗಿಸುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.