ಬೆಳಗಾವಿ: ‘ಕೊರೊನಾ ಭೀತಿ ನಡುವೆಯೂ ಇಲ್ಲಿನ ಆರ್ಎಲ್ಎಸ್ ಕಾಲೇಜಿನ ಕೇಂದ್ರದಲ್ಲಿ ನಡೆದ ದ್ವಿತೀಯ ಪಿಯುಸಿ ಕನ್ನಡ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಯಶಸ್ವಿಯಾಗಿದೆ’ ಎಂದು ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದರು.
ಮೌಲ್ಯಮಾಪನ ಕೇಂದ್ರದಲ್ಲಿ ಗುರುವಾರ ನಡೆದ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ, ವಿವಿಧ ಉಪನ್ಯಾಸಕ ಕವಿಗಳಿಂದ ರಚಿತವಾದ ‘ನಮ್ಮೊಳಗಿನ ನಾವು’ ಸಂಪಾದಿತ ಕವನಸಂಕಲನ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೊರೊನಾಕ್ಕೆ ಹೆದರಿ ಅನೇಕ ಉಪನ್ಯಾಸಕರು ಮೌಲ್ಯಮಾಪನಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಆದರೆ, ಕನ್ನಡ ಉಪನ್ಯಾಸಕರು ವಿದ್ಯಾರ್ಥಿಗಳ ಹಿತಾಸಕ್ತಿಯ ಕಾಳಜಿ ವಹಿಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದರು. ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕೆ ಹೊರತು ಪಲಾಯನ ಮಾಡಬಾರದು’ ಎಂದರು.
ಈ ವರ್ಷ ನಿವೃತ್ತಿ ಆಗಲಿರುವ ಚಿಂಚಲಿ ಮಹಾಕಾಳಿ ಪಿಯು ಕಾಲೇಜು ಉಪನ್ಯಾಸಕ ರಾಮಪ್ಪ ಹೊಸಳ್ಳಿ ಹಾಗೂ ಮಾಲ್ಯಮಾಪನಕ್ಕೆ ಸಹಕರಿಸಿದ ಹಿರಿಯ ಅಧ್ಯಾಪಕರನ್ನು ಸನ್ಮಾನಿಸಿದರು.
ಡಾ.ಮೈನುದ್ದೀನ ರೇವಡಿಗಾರ ಕವಿತೆ ವಾಚಿಸಿದರು. ಶ್ರೀಕಾಂತ ಕೆಂಧೂಳಿ ಹಾಗೂ ಸಿದ್ದು ಚೌಗಲಾ ಹಾಡಿದರು.
ಪ್ರಾಚಾರ್ಯ ಹಾಗೂ ಮೌಲ್ಯಮಾಪನ ಕೇಂದ್ರದ ನಿರೀಕ್ಷಕ ಕಾಪಸೆ ಪಠ್ಯ ಕೈಪಿಡಿ ಬಿಡುಗಡೆ ಮಾಡಿದರು. ಪ್ರಾಚಾರ್ಯ ಹಾಗೂ ಕೇಂದ್ರದ ಮುಖ್ಯಸ್ಥ ಡಾ.ವೈ.ಎಂ. ಯಾಕೊಳ್ಳಿ, ಆರ್.ಎಲ್.ಎಸ್. ಕಾಲೇಜಿನ ಪ್ರಾಚಾರ್ಯ ಎಸ್.ಜಿ. ನಂಜಪ್ಪನವರ ಇದ್ದರು.
ಪ್ರಾಚಾರ್ಯ ಪಿ.ಬಿ. ಅವಲಕ್ಕಿ ಸ್ವಾಗತಿಸಿದರು. ಡಾ.ಕಟ್ಟೀಕರ ಪರಿಚಯಿಸಿದರು. ಡಾ.ಕೆ.ಎನ್. ದೊಡ್ಡಮನಿ ನಿರೂಪಿಸಿದರು. ಡಾ.ನಾಗರಾಜ ನಾಡಗೌಡ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.