ADVERTISEMENT

ಬೆಳಗಾವಿ: ರಾಜಕುಮಾರ ಟಾಕಳೆ ವಿರುದ್ಧ ಇಲಾಖೆಗೂ ದೂರು ನೀಡಿದ ಯುವತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 11:21 IST
Last Updated 27 ಜುಲೈ 2022, 11:21 IST
ಬೆಳಗಾವಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ನವ್ಯಶ್ರೀ ಅವರಿಗೆ ಕೇಕ್ ತಿನ್ನಿಸುತ್ತಿರುವ ಚಿತ್ರ
ಬೆಳಗಾವಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ನವ್ಯಶ್ರೀ ಅವರಿಗೆ ಕೇಕ್ ತಿನ್ನಿಸುತ್ತಿರುವ ಚಿತ್ರ   

ಬೆಳಗಾವಿ: ‘ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ಕ್ರಮ ಕೈಗೊಳ್ಳಲು, ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡುತ್ತೇನೆ’ ಎಂದು ಚನ್ನಪಟ್ಟಣ ಮೂಲದ ಯುವತಿ ಹೇಳಿದರು.

ರಾಜಕುಮಾರ ವಿರುದ್ಧ ದೂರು ನೀಡಲು ಬುಧವಾರ ಇಲ್ಲಿನ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಬಂದ ಯುವತಿ ಗಂಟೆಗಟ್ಟಲೇ ಕಾದು ಕುಳಿತರು.

‘ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ರಾಜುಕುಮಾರ ವಿರುದ್ಧ ದೂರು ದಾಖಲಿಸಿದ್ದೇನೆ. ಅತ್ಯಾಚಾರ, ಅಪಹರಣ, ದೈಹಿಕ ಹಲ್ಲೆ, ಸಂಚು ರೂಪಿಸಿ ಮೋಸ, ಖಾಸಗಿ ವಿಡಿಯೊ ಹರಿಬಿಟ್ಟು ವೈಯಕ್ತಿಕ ಗೌರವಕ್ಕೆ ಧಕ್ಕೆ ತಂದ ವಿಚಾರವಾಗಿ 10 ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದೇನೆ. ಅಲ್ಲದೇ ಇಲಾಖೆಯಲ್ಲೂ ಅವರು ಹಲವು ಅಕ್ರಮ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಇಲಾಖಾ ವಿಚಾರಣೆ ನಡೆಸಬೇಕು ಎಂಬುದಾಗಿ ದೂರಿನಲ್ಲಿ ಕೋರಿದ್ದೇನೆ’ ಎಂದೂ ಯುವತಿ ಮಾಧ್ಯಮಗಳ ಮುಂದೆ ಹೇಳಿದರು.

ADVERTISEMENT

ಕೇಸ್‌ ರದ್ದು ಕೋರಿ ಅರ್ಜಿ:‘ವಿಚಾರಣೆಗೆ ಕರೆದ ಪೊಲೀಸರ ಎಲ್ಲ ಪ್ರಶ್ನೆಗಳಿಗೂ ನಿಖರ ಉತ್ತರ ನೀಡಿದ್ದೇನೆ. ನಾನೇ ಖುದ್ದಾಗಿ ವಿಚಾರಣೆಗೆ ಹಾಜರಾದ ಕಾರಣ ಇದರಲ್ಲಿ ನುಣಿಚಿಕೊಳ್ಳುವ ಅವಶ್ಯಕತೆಯೇ ಇಲ್ಲ. ಒಂದು ದಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯಕೀಯ ತಪಾಸಣೆಗೂ ಒಳಗಾಗಿದ್ದೇನೆ. ನನ್ನ ಕಡೆಯಿಂದ ಯಾವುದೇ ಅಸಹಕಾರ ತೋರಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜಕುಮಾರ ನನ್ನ ಮೇಲೆಯೇ ‘ಹನಿಟ್ರ್ಯಾಪ್‌’ ಮಾಡಿ ಮೋಸ ಮಾಡಿದ್ದಾರೆ. ಆದರೆ, ನಾನೇ ‘ಹನಿಟ್ರ್ಯಾ‍ಪ್‌’ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಸುಳ್ಳು ಪ್ರಕರಣ ಹಾಕಿದ್ದಾರೆ. ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿ ನ್ಯಾಯಾಲಯಕ್ಕೂ ಮೊರೆ ಹೋಗಿದ್ದೇನೆ’ ಎಂದು ಯುವತಿ ಹೇಳಿದರು.

ಕಾಂಗ್ರೆಸ್‌ ನಿಷ್ಠಾವಂತ ಸೇವಕಿ: ‘ನಾನು ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿದ್ದೇನೆ. ಕಾಂಗ್ರೆಸ್‌ನ ನಿಷ್ಠಾವಂತ ಯುವ ಸೇವಕಿ ನಾನು. ನನಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಯಾರೂ ಹೇಳಲು ಆಗುವುದಿಲ್ಲ. ‍ಪಕ್ಷದ ಹಿರಿಯ ಮುಖಂಡರ ಜೊತೆಗಿನ ನನ್ನ ಸಂಪರ್ಕದ ವಿಚಾರ ಈಗ ಬೇರೆಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಅದೆಲ್ಲ ಗಾಳಿಮಾತು’ ಎಂದೂ ಯುವತಿ ಹೇಳಿದರು.

‘ಶೀಲಾ ದೀಕ್ಷಿತ್‌ ಅವರು ದೆಹಲಿ ಮುಖ್ಯಮಂತ್ರಿ ಆಗಿದ್ದಾಗ, ಯೋಗಾನಂದ ಶಾಸ್ತ್ರಿ ಅವರು ಸ್ಪೀಕರ್‌ ಆಗಿದ್ದರು. ಅವರ ಪುತ್ರಿ ಪ್ರಿಯಾಂಕಾ ಸಿಂಗ್‌ ವಿಧಾನಸಭೆ ಚುನಾವಣೆಗೆ ನಿಂತಾಗ ನಾನು ಕೂಡ ಪ್ರಚಾರ ನಡೆಸಿದ್ದೇನೆ. ಅಲ್ಲದೇ, ಕಾಂಗ್ರೆಸ್‌ನ ಅತೃಪ್ತ ಶಾಸಕರು ಮುಂಬೈನ ಹೋಟೆಲ್‌ನಲ್ಲಿ ಇದ್ದಾಗ ನಾನು ‘ಗುಪ್ತ ಕಾರ್ಯಾಚರಣೆ’ ಮಾಡಿ, ಅವರ ಬಗ್ಗೆ ರಾಜ್ಯದ ಹಿರಿಯ ನಾಯಕರಿಗೆ ಸಂದೇಶ ರವಾನಿಸಿದ್ದು ನಿಜ. ಅದರ ಬಗ್ಗೆ ಟ್ವೀಟ್‌ ಕೂಡ ಮಾಡಿದ್ದೆ’ ಎಂದೂ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.