ಕಾಗವಾಡ ಮತ ಕ್ಷೇತ್ರದ ವಿವಿಧ ಗ್ರಾಮಗಳ ರೈತರಿಗೆ ಕೃಷಿ ಇಲಾಖೆಯ ಸಹಾಯ ಧನದಿಂದ ಮಂಜೂರಾದ ಕಬ್ಬು ಕಟಾವು ಯಂತ್ರಗಳನ್ನು ಶಾಸಕ ರಾಜು ಕಾಗೆ ವಿತರಿಸಿದರು
ಕಾಗವಾಡ: ಕಳೆದ 2 ವರ್ಷಗಳಿಂದ ಕಾಗವಾಡ ಕ್ಷೇತ್ರದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಕಷ್ಟು ಅನುದಾನ ತಂದಿರುವ ತೃಪ್ತಿ ನನಗಿದೆ. ಈಗ ಕೃಷಿ ಇಲಾಖೆಯ ಸಬ್ಸಿಡಿಯೊಂದಿಗೆ ನಾಲ್ವರು ರೈತರಿಗೆ ಕಬ್ಬು ಕಟಾವು ಯಂತ್ರ ಮತ್ತು ಅವಘಡಗಳಿಂದ ಮೃತರಾದ ಕುಟುಂಬದ ಸದಸ್ಯರಿಗೆ ಪರಿಹಾರಧನ ವಿತರಿಸಲಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ತಾಲ್ಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಕೃಷಿ ಇಲಾಖೆಯ ವತಿಯಿಂದ ಕ್ಷೇತ್ರದ ನಾಲ್ವರು ರೈತರಿಗೆ ಸಬ್ಸಿಡಿಯಲ್ಲಿ ಕಬ್ಬು ಕಟಾವು ಯಂತ್ರಗಳನ್ನು ಶನಿವಾರ ಹಸ್ತಾಂತರಿಸಿ, ವಿದ್ಯುತ್, ಸಿಡಿಲು, ಹಾವು ಕಡಿತ ಸೇರಿದಂತೆ ವಿವಿಧ ಅವಘಡಗಳಲ್ಲಿ ಮೃತರಾದ ನಾಲ್ವರು ರೈತ ಕುಟುಂಬದ ಸದಸ್ಯರಿಗೆ ಪರಿಹಾರಧನ ವಿತರಿಸಿ ಮಾತನಾಡಿದರು.
ರಸ್ತೆ ಸುಧಾರಣೆ, ನೀರಾವರಿ ಯೋಜನೆಗಳು, ಕೆರೆ ತುಂಬುವ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠನಗೊಳಿಸಲಾಗಿದೆ. ಕ್ಷೇತ್ರಕ್ಕೆ ಗರಿಷ್ಠ ಅನುದಾನ ತಂದಿರುವ ತೃಪ್ತಿ ಇದೆ. ಮುಂದೆಯೂ ಅಭಿವೃದ್ಧಿಗಾಗಿ ಅನುದಾನ ತರಲು ಶ್ರಮಿಸುವೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ನಿಂಗರಾಜ ಬಿರಾದರ, ಕಾಂತಿನಾಥ ಬಿರಾದಾರ,ಐನಾಪೂರ ಪ.ಪಂ ಸದಸ್ಯ ಅರುಣ ಗಾಣಿಗೇರ, ರಮೇಶ ಚೌಗುಲೆ ಸೇರಿದಂತೆ ಮುಖಂಡರು, ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.