ADVERTISEMENT

‘ಸಾರಿಗೆ ಸುರಕ್ಷಾ’ ಬಸ್ ಆಂಬುಲೆನ್ಸ್ ಸೇವೆಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 14:37 IST
Last Updated 4 ಜೂನ್ 2021, 14:37 IST
ಎನ್‌ಡಬ್ಲ್ಯುಕೆಆರ್‌ಟಿಸಿಯಿಂದ ಸಿದ್ಧಪಡಿಸಿರುವ ಬಸ್‌ ಆಂಬುಲೆನ್ಸ್‌ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಸೇವೆಗೆ ಸಮರ್ಪಿಸಿದರು
ಎನ್‌ಡಬ್ಲ್ಯುಕೆಆರ್‌ಟಿಸಿಯಿಂದ ಸಿದ್ಧಪಡಿಸಿರುವ ಬಸ್‌ ಆಂಬುಲೆನ್ಸ್‌ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಸೇವೆಗೆ ಸಮರ್ಪಿಸಿದರು   

ಬೆಳಗಾವಿ: ‘ಸಾರಿಗೆ ಸುರಕ್ಷಾ’ ಎಂಬ ಹೆಸರಿನ ಸಂಚಾರಿ ಐಸಿಯು– ಬಸ್‌ ಆಂಬುಲೆನ್ಸ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಸೇವೆಗೆ ಸಮರ್ಪಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯು ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾ.ಕ.ರ.ಸಾ. ಸಂಸ್ಥೆಯು ಸಾರಿಗೆ ಸುರಕ್ಷಾ ಹೆಸರಿನ ಆಂಬುಲೆನ್ಸ್ ಪ್ರಾರಂಭಿಸಿದೆ. ಆ ಆಂಬುಲೆನ್ಸ್ ನಿರ್ಮಾಣಕ್ಕೆ ₹ 7.88 ಲಕ್ಷ ವೆಚ್ಚ ತಗುಲಿದ್ದು, ಹುಬ್ಬಳ್ಳಿ ಯ ವಾ.ಕ.ರ.ಸಾ. ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ.

ನಾಲ್ಕು ಹಾಸಿಗೆಗಳಿದ್ದು, ಐಸಿಯು ಸೌಲಭ್ಯ ಹೊಂದಿವೆ. ಪ್ರತಿಯೊಂದು ಬೆಡ್‌ಗೂ ಆಕ್ಸಿಜನ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಬೆಡ್ ಹಾಗೂ ಕಿಟಕಿಗಳಿಗೆ ಕರ್ಟನ್ ಅಳವಡಿಸಲಾಗಿದೆ. ವಾಹನದಲ್ಲಿರುವ ಪ್ರತಿಯೊಂದು ಹಾಸಿಗೆಗಳಿಗೆ ಹಾಗೂ ವಾಹನದೊಳಗೆ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿ ಹಾಸಿಗೆಗಳ ನಡುವೆ ಔಷಧಿ/ವಸ್ತುಗಳ ಸ್ಟೋರ್ ಸ್ಟಾಂಡ್ ಅಳವಡಿಸಲಾಗಿದೆ. ಐವಿ ವ್ಯವಸ್ಥೆ, ತುರ್ತು ಔಷಧಿ ವ್ಯವಸ್ಥೆ ಹಾಗೂ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ ಒದಗಿಸಲಾಗಿದೆ. ಡ್ಯೂಟಿ ಡಾಕ್ಟರ್/ನರ್ಸ್‌ಗಳಿಗೆ ಪ್ರತ್ಯೇಕ ಕೌಂಟರ್ ಮತ್ತು ಪ್ಯಾನ್ ಅಳವಡಿಸಲಾಗಿದೆ.

ADVERTISEMENT

ಅನುಪಯುಕ್ತ ವಾಹನ ಬಳಸಿ ‘ಸ್ತ್ರೀ ಶೌಚಾಲಯ’:ವಾ.ಕ.ರ.ಸಾ. ಸಂಸ್ಥೆಯು ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅನುಪಯುಕ್ತ ವಾಹನವನ್ನು ‘ಸ್ತ್ರೀ ಶೌಚಾಲಯ’ವನ್ನಾಗಿ ಪರಿವರ್ತಿಸಿದೆ. ಅದನ್ನೂ ಮುಖ್ಯಮಂತ್ರಿ ಸೇವೆಗೆ ಸಮರ್ಪಿಸಿದರು. ಇದರ ನಿರ್ಮಾಣಕ್ಕೆ ₹ 8.13 ಲಕ್ಷ ವೆಚ್ಚ ಮಾಡಲಾಗಿದೆ.

ವಾಹನದ ಒಳ ಹೋಗುವ ಸ್ಟೆಪ್‌ನ ಬಲಭಾಗದಲ್ಲಿ ಮಗುವಿಗೆ ಡೈಪರ್ ಬದಲಾಯಿಸುವ ಸಲುವಾಗಿ ಮಗು ಆರೈಕೆ ವ್ಯವಸ್ಥೆಯ ಕೊಠಡಿ ಕಲ್ಪಿಸಲಾಗಿದೆ ಹಾಗೂ ಮಗುವಿಗೆ ಹಾಲೂಡಿಸುವ ಸಲುವಾಗಿ ಪ್ರತ್ಯೇಕ ಸ್ಥಳವಿದೆ. 4 ಶೌಚಾಲಯಗಳಿವೆ. ನೀರಿನ ನಳಗಳನ್ನು ಒಳಗೊಂಡಿರುವ 2 ಸಿಂಕ್‌ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ವ್ಯವಸ್ಥೆಗಾಗಿ 3.5 ಕೆವಿಎ ಸಾಮರ್ಥ್ಯದ ಯುಪಿಎಸ್ ಇನ್ವರ್ಟರ್ ಅಳವಡಿಸಲಾಗಿದೆ. ದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಲ್ಲಿ 3 ಗಂಟೆಗಳವರೆಗೆ ಬ್ಯಾಕಪ್ ಇರುತ್ತದೆ. ವಾಹನದ ಎಲ್ಲಾ ಕೊಠಡಿಗಳಿಗೆ ಬೆಳಕು ಮತ್ತು ಪ್ಯಾನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಶೌಚಾಲಯದಲ್ಲಿ ನೀರಿನ ರಭಸ ಹೆಚ್ಚಿಸಲು ಪ್ರೆಶರ್ ಪಂಪ್ ಅಳವಡಿಸಲಾಗಿದೆ. ಚಾಲಕರ ಕ್ಯಾಬಿನ್‌ನಲ್ಲಿ ಸಾವಿರ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯಹೊಂದಿರುವ ಟ್ಯಾಂಕ್ ಅಳವಡಿಸಲಾಗಿದೆ.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.