ಬೈಲಹೊಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೋದ್ಘಾರದ ನಡುವೆ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ದೇವಸ್ಥಾನ ಆವರಣದಿಂದ ಸಕಲ ವಾದ್ಯಮೇಳಗಳೊಂದಿಗೆ ಆರಂಭವಾದ ರಥೋತ್ಸವ ಭಟ್ಟನ ಕೂಟ, ವಾಸನ ಕೂಟ, ಜವಳಿ ಕೂಟ, ಬೆಲ್ಲದ ಕೂಟ, ಬಜಾರ ರಸ್ತೆ ಮಾರ್ಗವಾಗಿ ಮರಳಿ ದೇವಸ್ಥಾನ ಆವರಣಕ್ಕೆ ಬಂದು ತಲುಪಿತು.
ಸಹಸ್ರಾರು ಭಕ್ತರು ರಥಕ್ಕೆ ಹೂವು, ಹಣ್ಣು, ಉತ್ತುತ್ತೆ, ನಾಣ್ಯ ಸಮರ್ಪಿಸಿ ಭಕ್ತಿಭಾವ ಮೆರೆದರು. ರಥೋತ್ಸವ ಸಾಗಿದ ಮಾರ್ಗದಲ್ಲಿ ನೀರುಣಿಸಿ ಪೂಜೆ ಸಲ್ಲಿಸಲಾಯಿತು. ವಿವಿಧ ಪುಷ್ಪ ಮಾಲೆ, ಹನಮಂತ ದೇವರ ಮೂರ್ತಿ ಹೊತ್ತ ತೇರು ನೋಡುಗರನ್ನು ಆಕರ್ಷಿಸಿತು. ಭಕ್ತರು ಜೈ ಭಜರಂಗ ಬಲಿ, ಜೈ ಆಂಜನೇಯ, ಶ್ರೀರಾಮ, ಜಯರಾಮ ಎನ್ನುತ್ತ ಭಕ್ತಿಯಿಂದ ರಥೋತ್ಸವ ಎಳೆದರು. ಬೆಳಗ್ಗೆಯಿಂದ ರಾತ್ರಿಯವರೆಗೆ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಬಂದು ಹನಮಂತ ದೇವರ ದರ್ಶನ ಪಡೆದರು. ಭಕ್ತರಿಗೆ ಮಹಾಪ್ರಸಾದ ಸೇವೆ ನಡೆಯಿತು.
ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸದಾಶಿವಯ್ಯ ಪತ್ರಿಮಠ ರಥಕ್ಕೆ ಪೂಜೆ ಸಲ್ಲಿಸಿದರು. ದೇವಸ್ಥಾನ ಅರ್ಚಕರಾದ ಪೂಜೇರ ಕುಟುಂಬಸ್ಥರು ಪೂಜಾ ವಿಧಿ, ವಿಧಾನ ನೆರವೇರಿಸಿದರು. ಹಿರಿಯರಾದ ಮಹಾಬಳೇಶ್ವರ ಬೋಳನ್ನವರ, ಮಲ್ಲಿಕಾರ್ಜುನ ಬೋಳನ್ನವರ, ವಿನಯ ಬೋಳನ್ನವರ, ಶ್ರೀಶೈಲ ಗೀರನವರ, ಶ್ರೀಕಾಂತ ಕಡಕೋಳ, ಭಗವಂತ ಬಡಿಗೇರ, ಉಮೇಶ ಗೀರನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.