ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರಿನಲ್ಲಿ ಇರುವ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆ ಮೇಲೆ ಆರ್ಎಸ್ಎಸ್ ಕಾರ್ಯಕರ್ತರು ದಾಳಿ ಮಾಡಿ, ಧ್ವಂಸಗೊಳಿಸಿದ್ದಾರೆ ಎಂಬ ವದಂತಿ ಹರಡಿದ ಆರೋಪಿಗಳಾದ ಅನಿಸ್ ಉದ್ದೀನ್, ಖುಬಾನಿ ಮತ್ತು ದ್ರುಮಿ ವಿರುದ್ಧ ಜಿಲ್ಲಾ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸೋಫಿಯಾ ಖುರೇಷಿ ಹೆಸರು ಬಳಸಿಕೊಂಡು ಅನಿಸ್ ಉದ್ದೀನ್ ಎಂಬಾತ ‘ಎಕ್ಸ್’ ಖಾತೆಯಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ್ದ. ಇನ್ನಿಬ್ಬರು ಅದನ್ನು ಹರಡಿದ್ದರು. ಎರಡು ಪಂಗಡಗಳ ಮಧ್ಯೆ ದ್ವೇಷ ಬಿತ್ತುವುದರ ಜೊತೆಗೆ ದೊಂಬಿಗೆ ಪ್ರೇರಣೆ ನೀಡಿದ ಆರೋಪದಡಿ ಗುರುವಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸುದ್ದಿಗಾರರಿಗೆ ತಿಳಿಸಿದರು.
‘ಸದ್ಯ ‘ಎಕ್ಸ್’ನಲ್ಲಿ ಪೋಸ್ಟ್ ಡಿಲೀಟ್ ಆಗಿದೆ. ಅನಿಸ್ ಉದ್ದೀನ್ ಬಗ್ಗೆ ಮಾಹಿತಿ ನೀಡಲು ಎಕ್ಸ್ ಕಚೇರಿಗೆ ಕೋರಲಾಗಿದೆ. ಆರೋಪಿ ಒಂದು ವೇಳೆ ಭಾರತದಲ್ಲಿ ಇದ್ದರೆ ವಶಕ್ಕೆ ಪಡೆಯುತ್ತೇವೆ. ಕೆನಡಾದಲ್ಲಿ ಇದ್ದರೂ, ರಾಜತಾಂತ್ರಿಕ ಮತ್ತು ಇಂಟರ್ಪೋಲ್ ಮೂಲಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.