ADVERTISEMENT

ಸ್ವಾಮೀಜಿಗೆ ಕರೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಮುಖ್ಯಮಂತ್ರಿಗೆ ಮನವರಿಕೆ ಸವದಿ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 12:14 IST
Last Updated 28 ಅಕ್ಟೋಬರ್ 2020, 12:14 IST

‌ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಹಕ್ಕೊತ್ತಾಯ ಮಂಡಿಸಿ ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಬೈಲ್‌ ಫೋನ್ ಕರೆ ಮಾಡಿ ಚರ್ಚಿಸಿದರು.

‘ಸರ್ಕಾರವು ನಮಗೆ ಹಕ್ಕು ನೀಡಲು ತಿಂಗಳು ಗಡುವು ನೀಡುತ್ತಿದ್ದೇವೆ’ ಎಂದು ಸ್ವಾಮೀಜಿ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ಯಡಿಯೂರಪ್ಪ ಅವರ ಕರೆ ಬಂತು.

ಸ್ವಾಮೀಜಿ–ಮುಖ್ಯಮಂತ್ರಿ ಕೆಲ ಕಾಲ ಮಾತುಕತೆ ನಡೆಸಿದರು. ಬಳಿಕ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಂದಿಗೂ ಯಡಿಯೂರಪ್ಪ ಮಾತನಾಡಿದರು.

ADVERTISEMENT

‘ಎಲ್ಲಾ ಶಾಸಕರನ್ನೂ ಬೆಂಗಳೂರಿಗೆ ಕರೆದುಕೊಂಡು ಬಾ. ಮೀಸಲಾತಿಗೆ ಬೇಕಾದ ಪೂರಕ ನಿರ್ಣಯ ಮಾಡೋಣ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಸವದಿ ತಿಳಿಸಿದರು.

ಹೀಗಾಗಿ, ಸವದಿ ಮನವಿ ಮೇರೆಗೆ ಎಳನೀರು ಸೇವಿಸಿದ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ, ‘ಪಂಚಮಸಾಲಿ ಸಮಾಜದ ಋಣ ಭಾರ ನನ್ನ ಮೇಲಿದೆ. ವಿಧಾನಸಭೆಯ 3ನೇ ಮೆಟ್ಟಿಲು ಏರಲು ಸಮುದಾಯ ನನಗೆ ಕೊಡುಗೆ ನೀಡಿದೆ. ಈ ಋಣ ತೀರಿಸುವ ಕೆಲಸ ಮಾಡುತ್ತೇನೆ. ಎಲ್ಲ ಶಾಸಕರನ್ನೂ ಕರೆದುಕೊಂಡು ಬರುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ಕೊಡಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.