ಕೌಜಲಗಿ: ಕೌಜಲಗಿ ಭಾಗದಲ್ಲಿ ಬಡ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದು, ಇದನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದಲ್ಲಿ ₹12 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಈ ಹೊಸ ಆಸ್ಪತ್ರೆಯನ್ನು ನೋಡುತ್ತಿದ್ದರೆ ದೂರದ ಬೆಳಗಾವಿ, ಬೆಂಗಳೂರು ಆಸ್ಪತ್ರೆಗಳನ್ನು ನೋಡುವ ಭಾವನೆಗಳು ಬರುತ್ತವೆ. ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಐವರ ನುರಿತ ತಜ್ಞ ವೈದ್ಯರ ಸೇವೆಯು ಸಾರ್ವಜನಿಕರಿಗೆ ಸಿಗಲಿದೆ. ಉತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವುದರಿಂದ ಬಡ ರೋಗಿಗಳಿಗೆ ವರದಾನ ಆಗಲಿದೆ ಎಂದು ತಿಳಿಸಿದರು.
ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಇದರಲ್ಲಿ ಸಿಗಲಿವೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗಲು ಖಾಲಿ ಇರುವ ಸಿಬ್ಬಂದಿ ಹುದ್ದೆ ಭರ್ತಿ ಮಾಡಲು ಕ್ರಮಗಳನ್ನು ಕೈಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು. ಸುಮಾರು ₹58 ಲಕ್ಷ ವೆಚ್ಚದಲ್ಲಿ ಫರ್ನಿಚರ್ ಕೆಲಸವನ್ನು ಮಾಡಬೇಕಿದೆ. ಅದು ಕೂಡ ಬೇಗ ಆಗಲಿದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಮಾಡಿ ಕೊಟ್ಟರೂ ವೈದ್ಯರು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಹೆಚ್ಚುವರಿ ಸೌಲಭ್ಯಗಳನ್ನು ದೊರಕಿಸಿಕೊಟ್ಟರೂ ವೈದ್ಯರು ಸೇವೆ ಸಲ್ಲಿಸಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೌಜಲಗಿ ಭಾಗಕ್ಕೆ ಅಗತ್ಯವಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೊಡಲಾಗಿದೆ.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯೆಕ್ಷೆ ಯಲ್ಲವ್ವ ಈಟಿ, ಮುಖಂಡರಾದ ರಾಜೇಂದ್ರ ಸಣ್ಣಕ್ಕಿ, ಮಹಾದೇವಪ್ಪ ಭೋವಿ, ಎ.ಕೆ.ನಾಯಿಕ, ಪರಮೇಶ್ವರ ಹೊಸಮನಿ,ರವೀಂದ್ರ ಪರುಶೆಟ್ಟಿ, ಅಶೋಕ್ ನಾಯಿಕ, ವಿಠ್ಠಲ ಸವದತ್ತಿ, ಬೆಳಗಾವಿ ಡಿ.ಎಚ್.ಓ. ಡಾ. ಐ.ಪಿ.ಗಡಾದ, ಚಿಕ್ಕೋಡಿ ಎಡಿಎಚ್ಓ ಡಾ. ಎಸ್.ಎಸ್.ಗಡೇದ, ಗೋಕಾಕ ಟಿ.ಎಚ್.ಓ. ಡಾ. ಎಂ.ಎಸ್.ಕೊಪ್ಪದ, ನೀಲಪ್ಪ ಕೇವಟಿ, ವೆಂಕಟೇಶ ದಳವಾಯಿ, ಶಿವಲೀಲಾ ಕುಂದರಗಿ, ಎಸ್.ಬಿ.ಕೌಜಲಗಿ, ಗ್ರಾ.ಪಂ.ಸದಸ್ಯರು, ಸಹಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸ್ಥಳೀಯ ಮಟ್ಟದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ಸಿಬ್ಬಂದಿ ಹುದ್ದೆ ಭರ್ತಿಗೆ ಕ್ರಮದ ಭರವಸೆ
‘ಕೌಜಲಗಿ ನೂತನ ತಾಲ್ಲೂಕು ಘೋಷಣೆಗೆ ಒತ್ತಡ’ ಅಭಿವೃದ್ಧಿ ದೃಷ್ಟಿಯಿಂದ ಹೊಸ ಜಿಲ್ಲೆಗಳು ರಚನೆಯಾದರೆ ಒಳ್ಳೆಯದು. ಅದರ ಜೊತೆಗೆ ಕೌಜಲಗಿಯನ್ನು ಹೊಸ ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆಯೂ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಕಲ್ಮಡ್ಡಿ ಏತ ನೀರಾವರಿ ಸೌಲಭ್ಯವನ್ನು ಅನುಷ್ಠಾನ ಮಾಡಲಾಗಿದೆ. ರಾಮ ಲಿಂಗೇಶ್ವರ ಏತ ನೀರಾವರಿ ಮತ್ತು ಕಾಲುವೆಯ ನೀರು ಹರಿಯುತ್ತಿರುವುದರಿಂದ ರೈತರ ಬದುಕು ಬಂಗಾರವಾಗುತ್ತಿದೆ. ದೇವರ ದಯೆಯಿಂದ ಮಳೆಯು ಆಗುತ್ತಿರುವುದರಿಂದ ಹಿಡಕಲ್ ಜಲಾಶಯದ ನೀರಿನ ಮಟ್ಟವು ತುಂಬಿ ತುಳುಕುತ್ತಿದೆ ಎಂದರು. ಹೆಚ್ಚಾದ ನೀರನ್ನು ರೈತರ ಹಿತಕ್ಕಾಗಿ ಈಗಾಗಲೇ ಹರಿಸಲಾಗುತ್ತಿದೆ. ಎಷ್ಟು ಬೇಕಾದರೂ ನೀರನ್ನು ಬಳಕೆ ಮಾಡಿಕೊಳ್ಳಿ. ಆದರೆ ನೀರನ್ನು ವಿನಾಕಾರಣ ಪೋಲು ಮಾಡಬೇಡಿ ಎಂದರು. ಅರಭಾವಿ ಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಈಗಾಗಲೇ ₹30 ಕೋಟಿ ಅನುದಾನ ನೀಡಿದ್ದಾರೆ. ಇನ್ನೂ ₹30 ಕೋಟಿ ಬಿಡುಗಡೆ ಮಾಡುತ್ತೇನೆಂದು ಭರವಸೆಯನ್ನು ನೀಡಿದ್ದಾರೆ. ಸುಮಾರು ₹60 ಕೋಟಿ ಅನುದಾನ ಬಂದರೆ ಪ್ರಮುಖ ರಸ್ತೆಗಳು ಅಭಿವೃದ್ಧಿ ಆಗಲಿವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.