ಅಥಣಿ: ‘ಕಷ್ಟ ಕಾಲದಲ್ಲಿ ಮಾತ್ರ ದೇವರ ನಾಮಸ್ಮರಣೆ ಸಲ್ಲದು. ನಿತ್ಯವೂ ಸತ್ಯದ ಕಾಯಕದ ಜೊತೆಗೆ ದೇವರನ್ನು ಸ್ಮರಿಸಬೇಕು. ಆತ್ಮಜ್ಞಾನ ಮಾಡಿಕೊಂಡು, ದಾನ–ಧರ್ಮದ ಮೂಲಕ ಪುಣ್ಯ ಪಡೆದುಕೊಳ್ಳಬೇಕು’ ಎಂದು ಬಂಡಿಗಣಿ ಬಸವ ಗೋಪಾಲ ಮಠದ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮದಬಾಂವಿಯಲ್ಲಿ ನಡೆದ ಬಸವ ಗೋಪಾಲ 14ನೇ ಪಾರಮಾರ್ಥಿಕ ಸಪ್ತಾಹದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಕಷ್ಟದ ಸಮಯದಲ್ಲಿ ಅಸ್ತಿ, ಅಧಿಕಾರ ಅಥವಾ ಬಂಧು–ಬಳಗ ಕಾಯುವುದಿಲ್ಲ. ನಮ್ಮಲ್ಲಿ ಧರ್ಮವಿದ್ದರೆ ದೇವರು ಸದಾಕಾಲ ರಕ್ಷಣೆ ಮಾಡುತ್ತಾನೆ’ ಎಂದರು.
‘ಸಾಧು–ಸಂತರು, ರಾಜಕಾರಣಿಗಳು ನೀತಿ– ಧರ್ಮ ಪಾಲಿಸಬೇಕು. ಸಾವಿರ ವರ್ಷಗಳ ತಪಸ್ಸಿಗಿಂತ ನೀತಿಯೇ ಶ್ರೇಷ್ಠವಾದುದು. ಕಷ್ಟದಲ್ಲೂ ಸತ್ಯವನ್ನೇ ಮಾತನಾಡಬೇಕು. ಸತ್ಯದಲ್ಲಿರುವ ಶಕ್ತಿ ಇನ್ನೊಂದರಲಿಲ್ಲ. ಆಸ್ತಿಗೆ ಹೆಚ್ಚು ಆಸೆ ಮಾಡದೆ ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಸಾಗಿದರೆ ಮಾಂಸದ ಪಿಂಡವಾದ ಶರೀರವು ಮಂತ್ರ ಪಿಂಡವಾಗುವುದು’ ಎಂದು ತಿಳಿಸಿದರು.
‘ಮನಸ್ಸಿನ ತಾರತಮ್ಯದಿಂದ ಆತ್ಮ ಕೆಡುತ್ತಿದೆ; ಜಾತಿಯಿಂದ ಜಗತ್ತು ಕೆಡುತ್ತಿದೆ. ಮೇಲು–ಕೀಳು ಎನ್ನದೆ ಎಲ್ಲರೂ ಒಂದಾಗಿರಬೇಕು’ ಎಂದು ಆಶಿಸಿದರು.
ಮುಖಂಡ ಮಹಾದೇವ ಕೋರೆ, ಶಾಂತಮ್ಮ ತಾಯಿ ಬಿಲಕುಂದಿ ಮಾತನಾಡಿದರು. ಡಾ.ಭರತ ಲೋನಾರ,ಮುಖಂಡರಾದ ಮಾರುತಿ ದೊಡ್ಡಮನಿ, ಕರೆಪ್ಪ ದೊಡ್ಡ,ನಿ, ವಿಠ್ಠಲ ಕಾಂಬಳೆ, ವಿಠ್ಠಲ ತೊಡಕರ, ಮಾಳು ಮೋರೆ, ಸುನೀಲ ನಂದಿವಾಲೆ, ಹಾಜಿಸಾಬ ಕರೋಸಿ, ನಬಿಸಾಬ ಮುಲ್ಲಾ, ಮಲ್ಲಪ್ಪ ತವನಿಧಿ, ಮುರಿಗೆಪ್ಪ ಕಾಂಬಳೆ, ರಾಜಾರಾಮ ಭೋಸಲೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.