ಬೆಳಗಾವಿ: ‘ತಾಲ್ಲೂಕಿನ ‘ಅಷ್ಟೇ’ ಗ್ರಾಮದಲ್ಲಿ ದಲಿತರ ಸ್ಮಶಾನ ಭೂಮಿ ವಿವಾದ ಬಗೆಹರಿಸಿ, ಸರ್ಕಾರದ ನಿರ್ದೇಶನದಂತೆ ಜಾಗ ಒದಗಿಸಬೇಕು’ ಎಂದು ಆಗ್ರಹಿಸಿ ಗ್ರಾಮದ ಡಾ.ಅಂಬೇಡ್ಕರ್ ಶಕ್ತಿ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿದರು.
‘ಕೂಡಲೇ ಭೂಮಿ ಹಸ್ತಾಂತರಿಸಬೇಕು. ತಹಶೀಲ್ದಾರ್ ಅನ್ನು ವರ್ಗಾವಣೆ ಮಾಡಬೇಕು. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಲಕ್ಷ್ಮಣ ಕೋಲಕಾರ ಮಾತನಾಡಿ, ‘ಗ್ರಾಮದಲ್ಲಿ ದಲಿತರ ಭೂಮಿಯನ್ನು ಬೇರೆಯವರು ಅತಿಕ್ರಮಿಸಿಕೊಂಡಿದ್ದಾರೆ. ಈ ವಿವಾದ ಬಗೆಹರಿಸುವಂತೆ ಹಲವು ದಿನಗಳಿಂದಲೂ ಮನವಿ ಸಲ್ಲಿಸುತ್ತಿದ್ದೇವೆ. ಅಧಿಕಾರವಿದ್ದರೂ ಉಪ ವಿಭಾಗಾಧಿಕಾರಿ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ. ತಹಶೀಲ್ದಾರ್ ಶೋಷಿತರ ಕೆಲಸಗಳತ್ತ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರಿದರು.
ಮಾರುತಿ ಕೋಲಕಾರ, ಸಾಹೀಲ್ ಮೇತ್ರಿ, ಲಕ್ಷ್ಮಣ ಮೇತ್ರಿ, ಉಮೇಶ ಕೋಲಕಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.