ಬೆಳಗಾವಿ: ‘ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ಮತ್ತಿತರ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧವಾಗಿರುವ ಯುವಕರ ತಂಡವನ್ನು ಈ ವರ್ಷ ಸಜ್ಜುಗೊಳಿಸಲು ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನಿರ್ದೇಶನ ನೀಡಿದರು.
ಇಲ್ಲಿ ಗುರುವಾರ ನಡೆದ 2020–21ನೇ ಸಾಲಿನ ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆಯಾಗಿದೆ. ಎಲ್ಲ ಕಡೆಗಳಲ್ಲೂ ಆಕ್ಸಿಜನ್ ಹಾಸಿಗೆ ವ್ಯವಸ್ಥೆ ಸಮರ್ಪಕವಾಗಿದೆ. ಆಕ್ಸಿಜನ್ ಕೊರತೆಯಿಲ್ಲ.
ಸಾರ್ವಜನಿಕರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕೋವಿಡ್-19 ನಿಯಂತ್ರಣ ಸುಲಭ ಸಾಧ್ಯವಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ನೆಹರೂ ಯುವ ಕೇಂದ್ರದ ಪ್ರಸಕ್ತ ಸಾಲಿನ ಎಲ್ಲ ಚಟುವಟಿಕೆ ಮತ್ತು ಕಾರ್ಯಕ್ರಮಗಳಲ್ಲೂ ಯೂಥ್ ಕ್ಲಬ್ಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
‘ಯುವ ಕೇಂದ್ರದಿಂದ ತರಬೇತಿ ಪಡೆದಿರುವ ತಂಡಗಳನ್ನು ಪ್ರವಾಹ ಮತ್ತಿತರ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಜೊತೆಗೆ ಆಡಳಿತದೊಂದಿಗೆ ಕೈಜೋಡಿಸಲು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು’ ಎಂದರು.
‘ಮನವಿ ಸಲ್ಲಿಸಿದರೆ ಸರ್ಕಾರಿ ಕಟ್ಟಡ ಒದಗಿಸಲು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರೋಹಿತ್ ಕಲರಾ, ಲೆಕ್ಕಾಧಿಕಾರಿ ಆರ್.ಆರ್. ಮುತಾಲಿಕ ದೇಸಾಯಿ ಮಾತನಾಡಿದರು.
‘ಏಕ ಭಾರತ ಶ್ರೇಷ್ಠ ಭಾರತ’ ಮತ್ತು ‘ಆತ್ಮನಿರ್ಭರ್ ಭಾರತ’ ಈ ವರ್ಷದ ಪ್ರಮುಖ ವಿಷಯಗಳಾಗಿದ್ದು, ಇವುಗಳ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆ ಪ್ರಚಾರಗೊಳಿಸುವ ‘ಸಂವಿಧಾನ ಪೀಠಿಕೆ ಗೋಡೆ’ಯ ಮೇಲೆ ಜಿಲ್ಲಾಧಿಕಾರಿ ಹಾಗೂ ಇತರರು ಹಸ್ತಾಕ್ಷರ ಮಾಡಿದರು.
ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿ ಸದಸ್ಯರಾಗಿರುವ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ನಿವೃತ್ತ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ, ಕಲಾ ತಂಡದ ಭರತ ಕಲಾಚಂದ್ರ, ಮಹಿಳಾ ಕಲ್ಯಾಣ ಸಂಸ್ಥೆಯ ವಿಜಯಂತಿ ಚೌಗಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.