ಯರಗಟ್ಟಿ: ಬಾಕಿ ಉಳಿದಿರುವ ವಿವಿಧ ವಿದ್ಯಾರ್ಥಿ ವೇತನಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಸಿ ಎಬಿವಿಪಿ, ರೈತಸಂಘ, ಕನ್ನಡಪರ ಸಂಘಟನೆ, ದಲಿತ ಸಂಘರ್ಷ ಸಮಿತಿ, ವತಿಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರೆವಣೆಗೆ ಮೂಲಕ ತೆರಳಿ, ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ಎಬಿವಿಪಿ ಬೆಳಗಾವಿ ವಿಭಾಗ ಸಂಚಾಲಕ ಪಣಿರಾಘವೇಂದ್ರ ದೇಸಾಯಿ ಮಾತನಾಡಿ, ‘ಕಳೆದ ವರ್ಷದ ವಿದ್ಯಾಸಿರಿ ವೇತನ ಇನ್ನೂ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಿಲ್ಲ. ಪ್ರತಿ ವಿದ್ಯಾರ್ಥಿಗೆ ಉಟಕ್ಕೆ ನೀಡುವ ಹಣವನ್ನು ಹೆಚ್ಚಿಗೆ ಮಾಡಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಹಾಗೂ ಅಲ್ಪಸಂಖ್ಯಾತ ಇಲಾಖೆಯ ಹಾಸ್ಟೇಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
‘ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗಿದೆ. ರೈತ ವಿದ್ಯಾನಿಧಿ ರದ್ದು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಿಟ್ಗಳನ್ನು ತಕ್ಷಣವೇ ನೀಡಬೇಕು. ಶಾಲಾ–ಕಾಲೇಜ್ಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಕಾವೇರಿ ಉಳಾಗಡ್ಡಿ, ಮಲ್ಲಮ್ಮ ಅಂಚಿ, ಕೀರ್ತಿ ಕಟಕೋಳ, ಸರ್ಕಾರಿ ಮಾಮನಿ ಡಿಗ್ರಿ ಕಾಲೇಜ್ ಮತ್ತು ಜಕಾತಿ ಯುಸಿ ಕಾಲೇಜ್ ವಿದ್ಯಾರ್ಥಿಗಳ ಸಂಘಟಣೆಯ ಮುಖಂಡರಾದ ಅಕ್ಷತಾ ಪಟ್ಟೇದ, ರೂಪಾ ಹಣಬರ, ತೇಜಶ್ವಿನಿ ಈಳಗೇರ, ದೇವರಾಜ ಯರಗಣ್ವಿ, ನಾಗರಾಜ ಇಟಗೌಡ್ರ, ಗಣೇಶ ಹಿರೆಮಠ, ಮೌನೇಶ ಬಡಗೇರ, ಶಮೀರ ಮುಗುಟಕಾನ, ಶಾಹಿದಿ ಜಮಾದಾರ, ವಿವಿಧ ಸಂಘಟನೆಯ ಚಿದಂಬರ ಕಟ್ಟಿಮನಿ, ಸೋಮು ರೈನಾಪೂರ, ಸಿಂದೂರಿ ತೆಗ್ಗಿ, ಅಶೋಕ ನಂದಿ, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.