ಬೆಳಗಾವಿ: ‘ನಮಗೆ ಕೋವಿಡ್ ನೆಗೆಟಿವ್ (ಆರ್ಟಿಪಿಸಿಅರ್) ವರದಿ ಕಡ್ಡಾಯಗೊಳಿಸಬಾರದು ಮತ್ತು ಮುಕ್ತವಾಗಿ ಸಂಚರಿಸಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿ ಗಡಿಗೆ ಹೊಂದಿಕೊಂಡಿರುವ ನೆರೆಯ ಮಹಾರಾಷ್ಟ್ರದ ಶಿನೋಳಿ ಗ್ರಾಮಸ್ಥರು ತಾಲ್ಲೂಕಿನ ಬಾಚಿ ಚೆಕ್ಪೋಸ್ಟ್ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
‘ಕೃಷಿ ಉತ್ಪನ್ನಗಳ ಮಾರಾಟ, ಆಸ್ಪತ್ರೆಗಳು, ವ್ಯಾಪಾರ–ವಹಿವಾಟು ಮೊದಲಾದ ವಿಷಯಗಳಿಗೆ ಬೆಳಗಾವಿ ನಗರವನ್ನು ಅವಲಂಬಿಸಿದ್ದೇವೆ. ಕೋವಿಡ್–19 ತಡೆಯುವ ನೆಪದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗಾವಿಗೆ ಹೋಗುವ ನಾವು ನಿತ್ಯವೂ ಕೋವಿಡ್ ನೆಗೆಟಿವ್ ವರದಿ ಪ್ರಸ್ತುತಪಡಿಸುವುದು ಕಷ್ಟಸಾಧ್ಯವಾಗಿದೆ. ನಾವು ಕೊಲ್ಹಾಪುರಕ್ಕೆ ಹೋಗುವುದಕ್ಕೂ ಇದೇ ರಸ್ತೆ ಅವಲಂಬಿಸಿದ್ದೇವೆ. ಹೀಗಾಗಿ, ಕರ್ನಾಟಕ ಪೊಲೀಸರು ಈ ಭಾಗದ ಜನರಿಗೆ ವಿನಾಯಿತಿ ಕೊಡಬೇಕು’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಪೊಲೀಸರು, ‘ಕೋವಿಡ್ ಹರಡುವುದನ್ನು ತಡೆಯಲು ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದನ್ನು ಅನುಷ್ಠಾನಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.
ನಿತಿನ್ ಪಾಟೀಲ, ಪ್ರತಾಪ್ ಸೂರ್ಯವಂಶಿ, ಭೈರೂ, ರಘುನಾಥ್ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.