ADVERTISEMENT

ಕಾರಾಗೃಹಕ್ಕೆ ಡಿಐಜಿ ಭೇಟಿ, ‍ಪರಿಶೀಲನೆ

ವಿನಯ ಕುಲಕರ್ಣಿ ಅವರಿಗೆ ರಾಜಾತಿಥ್ಯ ಆರೋಪ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 10:34 IST
Last Updated 2 ಡಿಸೆಂಬರ್ 2020, 10:34 IST

ಬೆಳಗಾವಿ: ‘ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಮತ್ತು ಅಲ್ಲಿನ ಸಿಬ್ಬಂದಿ ‌ಕೋವಿಡ್–19 ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ’ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಂಧಿಖಾನೆ ಇಲಾಖೆ ಡಿಐಜಿ ಸೋಮಶೇಖರ್ ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳ ಸಭೆ ನಡೆಸಿದ ಅವರು, ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿದರು ಮತ್ತು ಮಾಹಿತಿ ಪಡೆದರು.

ಕೋವಿಡ್–19 ಕಾರಣದಿಂದ ಹೊರಗಿನ ಆಹಾರ ಪೂರೈಸದಂತೆ ಸರ್ಕಾರದಿಂದ ನಿರ್ದೇಶನವಿದೆ. ಅಲ್ಲದೇ ಸಂಬಂಧಿಕರ ಭೇಟಿಗೆ ಕೂಡ ಅವಕಾಶ ನೀಡಿಲ್ಲ. ಆದರೆ, ಕೈದಿಗಳಿಗೆ ಹೊರಗಿನ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಈ ಕಾರಣದಿಂದಾಗಿ ಡಿಐಜಿ ಬಂದಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಸಭೆ ಮುಗಿಸಿ ವಾಪಸಾಗುತ್ತಿದ್ದ ಅವರು, ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

‘ವಿನಯ ಅವರಿಗೆ ಕುಟುಂಬದವರು ತಲುಪಿಸಿದ್ದ ಬಟ್ಟೆಗಳು ಹಾಗೂ ಮಾತ್ರೆಗಳನ್ನು ಪರಿಶೀಲಿಸಿ ಕೊಡಲಾಗಿತ್ತು. ಅವರಿಗೆ ಜೈಲಿನ ಊಟವನ್ನೇ ನೀಡಲಾಗುತ್ತಿದೆ. ಹಾಸಿಗೆಯನ್ನೂ ಕೊಟ್ಟಿಲ್ಲ. ನಿಯಮದಂತೆ, ವಕೀಲರು ಹಾಗೂ ಕುಟುಂಬದವರಿಗೆ ಸಂಪರ್ಕಕ್ಕೆ ಸ್ಥಿರ ದೂರವಾಣಿಯನ್ನು ಅಧಿಕಾರಿಗಳ ಸಮ್ಮುಖದಲ್ಲೇ ಒದಗಿಸಲಾಗುತ್ತಿದೆ. ಅದನ್ನು ದಾಖಲಿಸಲಾಗುತ್ತಿದೆ. ಅವರಿಗೆ ಮೊಬೈಲ್‌ ಫೋನ್ ವ್ಯವಸ್ಥೆ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದು. ಕೋವಿಡ್–19 ಕಾರಣದಿಂದಾಗಿ ಹೊರಗಿನವರ ಭೇಟಿಗೆ ಅವಕಾಶ ಕೊಟ್ಟಿಲ್ಲ. ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ’ ಎಂದು ಸೂಪರಿಂಟೆಂಡೆಂಟ್ ಕೃಷ್ಣಕುಮಾರ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.