ADVERTISEMENT

ಅಧಿಕಾರಿಗಳ ತಾರತಮ್ಯ: ಪುರಸಭೆ ಕಚೇರಿಗೆ ಬೀಗ ಜಡಿದು ಹೋರಾಟ

ಹೊಲಿಗೆಯಂತ್ರ ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲ: ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:48 IST
Last Updated 9 ಜೂನ್ 2025, 15:48 IST
ಮುಗಳಖೋಡದಲ್ಲಿ ಪುರಸಭೆಯಲ್ಲಿ ಹೊಲಿಗೆಯಂತ್ರ ವಿತರಣೆಯಲ್ಲಿ ಅಧಿಕಾರಿಗಳ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸೋಮವಾರ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು
ಮುಗಳಖೋಡದಲ್ಲಿ ಪುರಸಭೆಯಲ್ಲಿ ಹೊಲಿಗೆಯಂತ್ರ ವಿತರಣೆಯಲ್ಲಿ ಅಧಿಕಾರಿಗಳ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಸೋಮವಾರ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು   

ಮುಗಳಖೋಡ: ಇಲ್ಲಿನ ಪುರಸಭೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಣೆ ಕಾರ್ಯಕ್ರಮ ಗೊಂದಲದ ಗೂಡಾಯಿತು.

ಶಾಸಕ ಮಹೇಂದ್ರ ತಮ್ಮಣ್ಣವರ ನೇತೃತ್ವದಲ್ಲಿ 375 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲು ಅಧಿಕಾರಿಗಳು ಮುಂದಾದರು. ಆಗ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ, ‘ಈ ಕಾರ್ಯಕ್ರಮದಡಿ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದೆ. ಒಂದೇ ಕುಟುಂಬದಲ್ಲಿ ಇಬ್ಬರು, ಮೂವರು ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡಲಾಗುತ್ತಿದೆ. ಪ್ರಭಾವಿಗಳಿಗಷ್ಟೇ ಮಣೆ ಹಾಕಿದ ಅಧಿಕಾರಿಗಳು, ಅರ್ಹರನ್ನು ಕಡೆಗಣಿಸಿದ್ದಾರೆ. ತಕ್ಷಣವೇ ಈ ಕಾರ್ಯಕ್ರಮ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಇದರಿಂದ ಬೇಸರಗೊಂಡ ಶಾಸಕ ಮಹೇಂದ್ರ, ‘ಈ ಗೊಂದಲಕ್ಕೆ ಪುರಸಭೆ ಅಧಿಕಾರಿಗಳೇ ಉತ್ತರ ನೀಡಬೇಕು’ ಎಂದು ಹೇಳಿ ಸ್ಥಳದಿಂದ ನಿರ್ಗಮಿಸಿದರು.

ADVERTISEMENT

ನಂತರ ಪುರಸಭೆ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ನಮಗೆ ಹೊಲಿಗೆ ಯಂತ್ರ ಕೊಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು. 

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ, ಪೊಲೀಸರು ಪ್ರತಿಭಟನಾ ಸ್ಥಳಕ್ಕಾಗಮಿಸಿ ಮಹಿಳೆಯರ ಮನವೊಲಿಕೆಗೆ ಪ್ರಯತ್ನಿಸಿದರು. 

‘ಫಲಾನುಭವಿಗಳ ಪಟ್ಟಿಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಗಿತಗೊಳಿಸಿದ್ದೇವೆ. ಶಾಸಕರ ಸೂಚನೆಯಂತೆ ಮತ್ತೊಮ್ಮೆ ಪಟ್ಟಿ ಸಿದ್ಧಪಡಿಸಿ, ಅರ್ಹ ಫಲಾನುಭವಿಗಳಿಗೆಲ್ಲ ಹೊಲಿಗೆ ಯಂತ್ರ ವಿತರಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಭರವಸೆ ಕೊಟ್ಟ ನಂತರ ಮಹಿಳೆಯರು ಪ್ರತಿಭಟನೆ ಹಿಂದಕ್ಕೆ ಪಡೆದರು. 

‘ನಮಗೆ ಶೀಘ್ರವೇ ಹೊಲಿಗೆ ಯಂತ್ರ ನೀಡಬೇಕು. ಇಲ್ಲದಿದ್ದರೆ ಮತ್ತೆ ಪುರಸಭೆಗೆ ಬೀಗ ಜಡಿದು  ಧರಣಿ ಮಾಡುತ್ತೇವೆ’ ಎಂದು ಮಹಿಳೆಯರು ಎಚ್ಚರಿಕೆ ಕೊಟ್ಟರು.

ಎರಡು ವರ್ಷಗಳ ಹಿಂದೆಯೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಸದಸ್ಯರು ಹೇಳುತ್ತಿರುವುದು ಸರಿಯಲ್ಲ

- ಚಿದಾನಂದ ಐಹೊಳೆ ಸಾಮಾಜಿಕ ಕಾರ್ಯಕರ್ತ

ಪುರಸಭೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸರಿಯಾಗಿ ತಿಳಿಯುತ್ತಿಲ್ಲ. ಶೀಘ್ರವೇ ಎಲ್ಲ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸುವ ಕೆಲಸವಾಗಬೇಕು

-ಮಹಾಂತೇಶ ಎರಡೆತ್ತಿ ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.