ADVERTISEMENT

ಅಥಣಿ| ದಾನಿಗಳ ಭಾವ ಶುದ್ಧವಾಗಿರಬೇಕು: ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 16:12 IST
Last Updated 23 ಜನವರಿ 2020, 16:12 IST
ಅಥಣಿಯಲ್ಲಿ ರಾಘವೇಂದ್ರ ಮಠದ ಅಭಿವೃದ್ಧಿಗೆ ನೆರವಾದವರನ್ನು ಸತ್ಕರಿಸಲಾಯಿತು
ಅಥಣಿಯಲ್ಲಿ ರಾಘವೇಂದ್ರ ಮಠದ ಅಭಿವೃದ್ಧಿಗೆ ನೆರವಾದವರನ್ನು ಸತ್ಕರಿಸಲಾಯಿತು   

ಅಥಣಿ: ‘ದಾನಿಗಳ ಸಹಕಾರದಿಂದಾಗಿ ಇಲ್ಲಿನ ರಾಘವೇಂದ್ರ ಮಠ ಸಮಗ್ರ ಅಭಿವೃದ್ಧಿ ಕಂಡಿದೆ. ಇದು ಮುಂದೆಯೂ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ’ ಎಂದು ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಹೇಳಿದರು.

ಮಠದ ಆವರಣದಲ್ಲಿ ಆಯೋಜಿಸಿದ್ದ ದಾನಿಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪುರಾಣ ಕಾಲದಿಂದಲೂ ದಾನ ಪರಂಪರೆ ಬೆಳೆದುಬಂದಿದೆ. ಇಂದಿಗೂ ಮುಂದುವರಿದಿದೆ. ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಕೌಟುಂಬಿಕ ಅಗತ್ಯಕ್ಕೆ, ಇನ್ನೊಂದು ಭಾಗವನ್ನು ಸಂಕಷ್ಟದ ಸಮಯದಲ್ಲಿ ಉಪಯೋಗಕ್ಕಾಗಿ ಹಾಗೂ ಮತ್ತೊಂದು ಭಾಗವನ್ನು ಧರ್ಮ, ಸಮಾಜಕ್ಕೆ ದಾನ ಕೊಡಬೇಕು. ದಾನ ಮಾಡುವವರ ಮತ್ತು ಪಡೆದುಕೊಳ್ಳುವವರ ಭಾವ ಶುದ್ಧವಾಗಿರಬೇಕು. ಉದ್ದೇಶ ಅಥವಾ ದುರುದ್ದೇಶ ಇರಬಾರದು. ದಾನಿಗಳು ಪ್ರಶಂಸೆ ಬಯಸಬಾರದು. ಪಡೆದವರು ದಾನಿಗಳನ್ನು ಪ್ರಶಂಸಿಸದೇ ಇರಬಾರದು’ ಎಂದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ಅರವಿಂದರಾವ ದೇಶಪಾಂಡೆ, ವಿಜಯಪುರದ ಪಂ.ಮಧ್ವಾಚಾರ್ಯ, ರಾಘವೇಂದ್ರ ಸ್ವಾಮಿ ಮಠ ಟ್ರಸ್ಟ್‌ ಉಪಾಧ್ಯಕ್ಷ ಎಸ್.ವಿ. ಜೋಶಿ ಮಾತನಾಡಿದರು.

ಮಠದ ಅಭಿವೃದ್ಧಿಗೆ ಶ್ರಮಿಸಿದ 75 ವರ್ಷ ಮೇಲ್ಪಟ್ಟ ಸ್ವಯಂಸೇವಕರನ್ನು ಸತ್ಕರಿಸಲಾಯಿತು. ದಾನಿಗಳ ಪರವಾಗಿ ಬೆಳಗಾವಿಯ ಉದ್ಯಮಿ ಮಧ್ವಾಚಾರ್ಯ ಆಯಿ ಮಾತನಾಡಿದರು.

ಟ್ರಸ್ಟ್‌ ಸದಸ್ಯರಾದ ಅನಿಲ ದೇಶಪಾಂಡೆ, ರಾಜು ಪಾಟೀಲ, ಶ್ರೀನಿವಾಸಾಚಾರ್ಯ ಬಿಳ್ಳೂರ ಇದ್ದರು.

ವಾಮನ ಕುಲಕರ್ಣಿ ನಿರೂಪಿಸಿದರು. ಅನಿಲ ದೇಶಪಾಂಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.