ಬೆಳಗಾವಿ: ನಗರದ ಗೋಗಟೆ ವೃತ್ತದಲ್ಲಿ ಮಂಗಳವಾರ ಮಧ್ಯರಾತ್ರಿ ಮುಂದಿನ ವಾಹನಕ್ಕೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದರು.
ಮೃತರನ್ನು ಉತ್ತರಪ್ರದೇಶದ ತಿಲಕನಗರದ ಮಹ್ಮದರಫೀಕ ಮಹ್ಮದಖಲೀಲ (34) ಎಂದು ಗುರುತಿಸಲಾಗಿದೆ.
‘ಚಾಕೊಲೇಟ್ ಬಾಕ್ಸ್ಗಳಿದ್ದ ಕ್ಯಾಂಟರ್ ಖಾನಾಪುರ ಕಡೆಯಿಂದ ಚನ್ನಮ್ಮ ವೃತ್ತದ ಕಡೆಗೆ ಬರುತ್ತಿತ್ತು. ರೈಲ್ವೆ ಮೇಲ್ಸೇತುವೆ ಬಳಿಯ ಗೋಗಟೆ ವೃತ್ತದಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಮುಂದೆ ನಿಂತಿದ್ದ ಇನ್ನೊಂದು ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ಯಾಬಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಾಗಿಲುಗಳು ಲಾಕ್ ಆಗಿ ಚಾಲಕ ಹೊರಬರಲು ಆಗಲಿಲ್ಲ. ಕ್ಯಾಬಿನ್ ಸಂಪೂರ್ಣ ಸುಟ್ಟು ಕರಕಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಕ್ಯಾಂಟರ್ ನಾಗಾಲ್ಯಾಂಡ್ ನೋಂದಣಿಯದು. ಚಾಲಕ ಮಾತ್ರ ಅದರಲ್ಲಿದ್ದರು. ಈ ಘಟನೆಯ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸ್ಥಳಕ್ಕೆ ಸಂಚಾರ ಎಸಿಪಿ ಆರ್.ಆರ್. ಕಲ್ಯಾಣಶೆಟ್ಟಿ, ದಕ್ಷಿಣ ಸಂಚಾರ ಠಾಣೆ ಇನ್ಸ್ಪೆಕ್ಟರ್ ಪಿ.ಎಚ್. ಕರಿಕಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.