ಬೆಳಗಾವಿ: ‘ಸಂಚಾರ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಮೊತ್ತವನ್ನು ಇಳಿಕೆ ಮಾಡಬೇಕು’ ಎಂದು ಒತ್ತಾಯಿಸಿ ಜೈ ಭೀಮ್ ಓಂ ಸಾಯಿ ವಾಣಿಜ್ಯ ವಾಹನ ಮಾಲೀಕರು ಹಾಗೂ ಚಾಲಕರ ಸಂಘದವರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
‘ಹೆಚ್ಚಿನ ದಂಡ ವಿಧಿಸುತ್ತಿರುವುದರಿಂದ ವಾಹನಗಳ ಮಾಲೀಕರಿಗೆ ತೊಂದರೆಯಾಗುತ್ತಿದೆ. ವಾಹನಗಳ ಎಲ್ಲ ದಾಖಲೆಗಳು ಸರಿಯಾಗಿದ್ದರೂ ಪೊಲೀಸರು ಅಥವಾ ಆರ್ಟಿಒದವರು ನಿಯಮ ಉಲ್ಲಂಘನೆಯಾಗಿದೆ ಎಂದು ಏನಾದರೊಂದು ನೆಪ ಹೇಳಿ ದಂಡ ವಿಧಿಸುತ್ತಿದ್ದಾರೆ. ಹೀಗಾಗಿ, ನಾವು ದುಡಿಯುವ ಹಣದಲ್ಲಿ ಹೆಚ್ಚಿನ ಪ್ರಮಾಣವನ್ನು ದಂಡಕ್ಕೆಂದೇ ವಿನಿಯೋಗಿಸುವಂತಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.
‘ಟೋಲ್ ನಾಕಾದಲ್ಲಿ ಸ್ಥಳೀಯ ವಾಹನಗಳಿಗೆ ಒಂದು ಕಡೆಯಿಂದ ಮಾತ್ರ ಟೋಲ್ ತೆಗೆದುಕೊಳ್ಳಬೇಕು. ವಾಹನ ವಿಮೆ ಮೊತ್ತವನ್ನು ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.
ಸಂಘದ ಸದಸ್ಯರಾದ ರಾಜು ಎಸ್., ಮಹಾದೇವ ಮಾನೆ, ರಾನಪ್ಪ ದೊಡ್ಡಮನಿ, ಸಂದೇಶ ಚೌಗಲೆ, ರಾಜು ಲೋಹರ್, ಅನಿಲ ತಬರಿ, ಬಾಲು ತಬರಿ, ಸುರೇಶ ತಳವಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.