ಬೆಳಗಾವಿ: ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು, ಗೋವಿನಜೋಳದ ಕಾಳು ಬಳಸಿ ಸಿದ್ಧಪಡಿಸಿದ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪಿಸಲಿದೆ. ಕಲಾವಿದ ಸುನೀಲ ಆನಂದಾಚೆ ಇದನ್ನು ಸಿದ್ಧಪಡಿಸಿದ್ದಾರೆ.
‘ಹುಲ್ಲು, ನಿರುಪಯುಕ್ತ ಕಾಗದ ಬಳಸಿ, 11.5 ಅಡಿ ಎತ್ತರದ ಮೂರ್ತಿ ಸಿದ್ಧಪಡಿಸಿದ್ದೇನೆ. 31 ಕೆ.ಜಿ ಗೋವಿನಜೋಳದ ಕಾಳುಗಳನ್ನು ಗಂಜಿಯಲ್ಲಿ ಬೆರೆಸಿ, ಕಾಗದದ ಮೇಲೆ ಅಂಟಿಸಿದ್ದೇನೆ. ಇಬ್ಬರು ಕಾರ್ಮಿಕರ ನೆರವಿನಿಂದ ತಿಂಗಳಲ್ಲಿ ಮೂರ್ತಿ ಸಿದ್ಧವಾಗಿದೆ’ ಎಂದು ಸುನೀಲ ಆನಂದಾಚೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ಲಂಬರ್ ಆಗಿರುವ ನಾನು, 25 ವರ್ಷಗಳಿಂದ ಬಿಡುವಿನಲ್ಲಿ ಮೂರ್ತಿಗಳನ್ನು ಸಿದ್ಧಪಡಿಸುತ್ತೇನೆ. ರುದ್ರಾಕ್ಷಿ, ಹುಣಸೆ ಬೀಜ ಬಳಸಿ ಈ ಹಿಂದೆ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದೇನೆ’ ಎಂದರು.
‘ನಾವು ಕಳೆದ ಐದು ವರ್ಷಗಳಿಂದ ಪರಿಸರಸ್ನೇಹಿ ಆಚರಣೆಗೆ ಒತ್ತು ನೀಡಿದ್ದೇವೆ. ಗೋವಿನಜೋಳ ಪೌಷ್ಟಿಕ ಆಹಾರ. ಈ ಕುರಿತು ಜಾಗೃತಿ ಮೂಡಿಸುವುದು ಈಗಿನ ಉದ್ದೇಶ’ ಎಂದು ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಮೇಘನ್ ಲಂಗರಕಾಂಡೆ ಹೇಳಿದರು.
‘11 ದಿನಗಳ ಬಳಿಕ ಹೊಂಡದಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಪಿಒಪಿ ಮೂರ್ತಿಗಳಿದ್ದರೆ ಅದರಲ್ಲಿನ ಯಾವ ವಸ್ತು ತಿನ್ನಲಾಗದು. ಗೋವಿನಜೋಳದ ಕಾಳುಗಳಿದ್ದರೆ ಪ್ರಾಣಿ–ಪಕ್ಷಿಗಳಾದರೂ ತಿನ್ನುತ್ತವೆ’ ಎಂದರು.
–––
ಪರಿಸರಕ್ಕೆ ಮಾರಕ ಆಗದಿರಲೆಂದು ನಾನು ಪಿಒಪಿ ಮೂರ್ತಿಗಳಿಗೆ ಬದಲಾಗಿ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆಗೆ ಒತ್ತು ನೀಡುತ್ತೇನೆ
-ಸುನೀಲ ಆನಂದಾಚೆ ಕಲಾವಿದ
11 ದಿನ ಗಣೇಶೋತ್ಸವದ ಕೊನೆಯ ಎರಡು ದಿನ ಭಕ್ತರಿಗೆ ಸಿಹಿ ಗೋವಿನಜೋಳವನ್ನೇ ಪ್ರಸಾದ ರೂಪದಲ್ಲಿ ವಿತರಿಸುತ್ತೇವೆ.
ಮೇಘನ್ ಲಂಗರಕಾಂಡೆ ಅಧ್ಯಕ್ಷ ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.