ಬೆಳಗಾವಿ: ಅಂಗವಿಕಲರ ವಿಶೇಷ ಶಾಲೆಗಳ ಅನುದಾನ ಸಂಹಿತೆಯಡಿ (1982ರ) ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಸಿಬ್ಬಂದಿಯನ್ನು ಎಚ್ಆರ್ಎಂಎಸ್ಗೆ ಅಳವಡಿಸಿ ಪ್ರತಿ ತಿಂಗಳೂ ಅವರವರ ವೈಯಕ್ತಿಕ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವೇತನ ಜಮಾ ಮಾಡುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಅನುದಾನಿತ ಶಾಲೆಗಳ ನೌಕರರ ಸಂಘದವರು ಸೋಮವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್ನಲ್ಲಿ ಪ್ರತಿಭಟನೆ ನಡೆಸಿದರು.
‘27 ಅಂಗವಿಕಲರ ಶಾಲೆಗಳ 357 ಸಿಬ್ಬಂದಿಯನ್ನು ಊರ್ಜಿತಗೊಳಿಸಬೇಕು. ಪ್ರಸ್ತುತ ಇರುವ ತ್ರೈಮಾಸಿಕ ವೇತನ ಪದ್ಧತಿ ರದ್ದುಗೊಳಿಸಿ ಪ್ರತಿ ತಿಂಗಳೂ ವೇತನ ಬಿಡುಗಡೆ ಮಾಡಬೇಕು. ಅನುದಾನಿತ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ, ನಿಧನ ಹೊಂದಿದ ಸಿಬ್ಬಂದಿಗೆ ನಿವೃತ್ತಿ ವೇತನ, ಕುಟುಂಬ ಪಿಂಚಣಿ ನೀಡಬೇಕು. ನಮಗೂ 6ನೇ ವೇತನ ಶ್ರೇಣಿ ಪರಿಷ್ಕರಣೆಯನ್ನು ಅನ್ವಯಿಸಬೇಕು. ರಜೆ ನಗದೀಕರಣ ಸೌಲಭ್ಯ ನೀಡಬೇಕು. ಅನುದಾನ ಪಡೆಯುತ್ತಿರುವ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಬೇಕು’ ಎಂದು ಕೋರಿದರು.
ಸಂಘದ ಅಧ್ಯಕ್ಷ ಎಂ.ಎಸ್. ದೊಡ್ಡಮನಿ ಹಾಗೂ ಕಾರ್ಯದರ್ಶಿ ಎಸ್.ಡಿ. ಯಳ್ಳೂರ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.