ಬೆಳಗಾವಿ: ‘ಕೋವಿಡ್ ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ₹ 50ಸಾವಿರ ಪರಿಹಾರ ನೀಡಬೇಕು. ಕೃಷಿಕರ ಮಕ್ಕಳ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ಲಾಕ್ಡೌನ್ ಪರಿಣಾಮ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ಸಣ್ಣ ರೈತರು ಮತ್ತು ಕೆಲಸ ಸಿಗದೆ ಕೃಷಿ ಕೂಲಿ ಕಾರ್ಮಿಕರು ಬಹಳ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ, ಜೀವನ ನಡೆಸುವುದೇ ದುಸ್ತರವಾಗಿದೆ. ಕೃಷಿಕರ ಮಕ್ಕಳು ಶೈಕ್ಷಣಿಕ ಸಾಲ ತೀರಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ, ಸರ್ಕಾರ ಈ ವರ್ಗದ ಎಲ್ಲರಿಗೂ ಆರ್ಥಿಕವಾಗಿ ನೆರವಾಗಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಅಪ್ಪಾಸಾಹೇಬ ದೇಸಾಯಿ ಮಾತನಾಡಿ, ‘ಸಣ್ಣ ರೈತರಿಗೆ ಕೋವಿಡ್ ಪ್ಯಾಕೇಜ್ನಲ್ಲಿ ಪರಿಹಾರ ದೊರೆಯುವಂತಾಗಲು ಸರ್ಕಾರದ ನಿಯಮಗಳನ್ನು ಸಡಿಲಿಸಬೇಕು. ಅರ್ಹ ರೈತರನ್ನು ಗುರುತಿಸಿ ಪರಿಹಾರ ವಿತರಿಸಬೇಕು. ಹೆಚ್ಚು ಸಂಕಷ್ಟದಲ್ಲಿರುವ ಸಣ್ಣ ಮೊದಲ ಆದ್ಯತೆ ಕೊಡಬೇಕು’ ಎಂದು ಆಗ್ರಹಿಸಿದರು.
ಸುಭಾಷ ದಾಯಗೊಂಡ, ರಾಮಚಂದ್ರ ಫಡಕೆ, ರಾಮನಗೌಡ ಪಾಟೀಲ, ಟೋಪಣ್ಣ ಬಸರೀಕಟ್ಟಿ, ಮಾರುತಿ ಬುರಲಿ, ನಾಮದೇವ ದುಡುಂ, ರಾಜು ಕಾಗಣೇಕರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.