ADVERTISEMENT

ಗುರುಗಳನ್ನು ಆಹ್ವಾನಿಸಿ ಸತ್ಕರಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 15:36 IST
Last Updated 25 ಫೆಬ್ರುವರಿ 2021, 15:36 IST
ಸವದತ್ತಿ ತಾಲ್ಲೂಕು ಚುಳಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಸತ್ಕರಿಸಿದರು
ಸವದತ್ತಿ ತಾಲ್ಲೂಕು ಚುಳಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಸತ್ಕರಿಸಿದರು   

ಚುಳಕಿ (ಸವದತ್ತಿ ತಾಲ್ಲೂಕು): ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1989-90 ಮತ್ತು 1990-91ರಲ್ಲಿ 7ನೇ ತರಗತಿ ಕಲಿತಿದ್ದ ಹಳೆಯ ವಿದ್ಯಾರ್ಥಿಗಳು 21 ವರ್ಷಗಳ ಬಳಿಕ ಶಿಕ್ಷಕರನ್ನು ಆಹ್ವಾನಿಸಿ ಗುರುವಂದನೆ ಸಲ್ಲಿಸಿದ್ದಾರೆ.

ಚುಳಕಿಯ ಗವಿಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ಮತ್ತು ಉಗರಗೋಳದ ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವನ್ನು ಗ್ರಾಮದ ನಿವೃತ್ತ ಶಿಕ್ಷಕ ಗುರಪ್ಪ ಮಾಗುಂಡ ಉದ್ಘಾಟಿಸಿದರು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಕಾರಣರಾದ ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಸೊಪ್ಪಡ್ಲ, ಕೆ.ಜಿ. ಭಜಂತ್ರಿ, ಜಿ.ಎಸ್. ಗರಗದ, ಪ್ರಭಾವತಿ ಕುಲಕರ್ಣಿ, ಸದ್ಯ ಬೆಳಗಾವಿ ತಾಲ್ಲೂಕು ಹಂಗರಗಾ ಮರಾಠಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಬಸಮ್ಮ ಭಜಂತ್ರಿ, ಆಚಮಟ್ಟಿ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಕಲ್ಲಯ್ಯ ಪೂಜೇರ ಅವರನ್ನು ಸತ್ಕರಿಸಿದರು.

ಜಿ.ಎಸ್. ಗರಗದ ಮಾತನಾಡಿ, ‘ಎರಡು ದಶಕಗಳ ನಂತರ ತಮ್ಮನ್ನು ಶಾಲೆಗೆ ಆಹ್ವಾನಿಸಿ ಸತ್ಕರಿಸಿದ ಹಳೆಯ ವಿದ್ಯಾರ್ಥಿಗಳ ಈ ಕಾರ್ಯ ಖುಷಿ ತಂದಿದೆ’ ಎಂದರು.

ADVERTISEMENT

‘ತಮ್ಮ ಬಳಿ ವಿದ್ಯೆ ಕಲಿತ ವಿದ್ಯಾರ್ಥಿಗಳು ಈಗ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವುದನ್ನು ಗಮನಿಸಿದರೆ ಶಿಕ್ಷಕ ಜೀವನ ಸಾರ್ಥಕ ಎನಿಸಿದೆ’ ಎಂದು ಶಿಕ್ಷಕಿ ಬಸಮ್ಮ ಭಜಂತ್ರಿ ಹೇಳಿದರು.

ಗ್ರಾಮದ ಹಿರಿಯರಾದ ಗುರುಶಾಂತಯ್ಯ ಹಿರೇಮಠ, ಚಂದ್ರಶೇಖರಯ್ಯ ಚುಳಕಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.