ADVERTISEMENT

ಬೆಳಗಾವಿ: ಮಸಗುಪ್ಪಿ ಗ್ರಾಮ, 4 ಸೇತುವೆ ಜಲಾವೃತ, 12 ಕಾಳಜಿ ಕೇಂದ್ರಗಳ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:56 IST
Last Updated 24 ಜುಲೈ 2021, 16:56 IST
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಮನೆಗಳಿಗೆ ನೀರು ಹೊಕ್ಕಿರುವ ಚಿತ್ರ 
ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಮನೆಗಳಿಗೆ ನೀರು ಹೊಕ್ಕಿರುವ ಚಿತ್ರ    

ಮೂಡಲಗಿ (ಬೆಳಗಾವಿ ಜಿಲ್ಲೆ): ಸತತ ಮಳೆಯಿಂದಾಗಿ ಎರಡು ದಿನಗಳಿಂದ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲ್ಲೂಕಿನ ಮಸಗುಪ್ಪಿ ಗ್ರಾಮವು ಸಂಪೂರ್ಣ ಜಲಾವೃತಗೊಂಡಿದೆ.

ಪ್ರವಾಹ ಭೀತಿಯ ಬಗ್ಗೆ ಶುಕ್ರವಾರ ಮುನ್ನೆಚ್ಚರಿಕೆ ನೀಡಿದ್ದರಿಂದ ಗ್ರಾಮಸ್ಥರು ಸಾಮಗ್ರಿಗಳು ಮತ್ತು ಜಾನುವಾರುಗಳನ್ನು ಟ್ರ್ಯಾಕ್ಟರ್‌, ಜೀಪು ಮತ್ತಿತರ ವಾಹನಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಸ್ಥಳಾಂತರಗೊಂಡಿದ್ದಾರೆ. ಕೆಲವರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಇದ್ದಾರೆ. ಸಾವು–ನೋವು ವರದಿಯಾಗಿಲ್ಲ.

ಮಸಗುಪ್ಪಿ ಮತ್ತು ತಿಗಡಿ ಸೇತುವೆಯು ಜಲಾವೃತಗೊಂಡಿದ್ದರಿಂದ ಶುಕ್ರವಾರ ಸಂಜೆಯಿಂದ ಯಾದವಾಡ, ಬಾಗಲಕೋಟೆ ಮತ್ತು ಸಂಕೇಶ್ವರ, ನಿಪ್ಪಾಣಿ ಕಡೆಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ADVERTISEMENT

ಸುಣಧೋಳಿ, ಹುಣಶ್ಯಾಳ ಪಿವೈ, ಢವಳೇಶ್ವರ ಸೇತುವೆಗಳು ಜಲಾವೃತಗೊಂಡಿದ್ದರಿಂದ ಹಲವಾರು ಗ್ರಾಮಗಳಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ. ಸಾವಿರಾರು ಎಕರೆ ಬೆಳೆಗಳು ನೀರಲ್ಲಿ ನಿಂತಿವೆ. 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಪಟಗುಂದಿಯಲ್ಲಿ 4, ವಡೇರಹಟ್ಟಿಯಲ್ಲಿ 2, ಹುಣ್ಯಶಾಳ ಪಿ.ವೈ. 2, ಮಸಗುಪ್ಪಿ, ಸುಣಧೋಳಿ, ಮುನ್ಯಾಳ ಸ್ವಾಮಿ ತೋಟದಲ್ಲಿ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್‌ ಡಿ.ಜೆ. ಮಹಾತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.