ಬೆಳಗಾವಿ: ನಾಲ್ವರು ಸುಲಿಗೆಕೋರರನ್ನು ಬಂಧಿಸಿರುವ ತಾಲ್ಲೂಕಿನ ಮಾರಿಹಾಳ ಠಾಣೆ ಪೊಲೀಸರು ಒಂದು ಆಟೊರಿಕ್ಷಾ, 5 ದ್ವಿಚಕ್ರವಾಹನಗಳು, ₹ 6.36 ಲಕ್ಷ ಮೌಲ್ಯದ 168 ಗ್ರಾಂ. ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ವಿವಿಧ 4 ಠಾಣೆಗಳ ವ್ಯಾಪ್ತಿಯ 10 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ಉದ್ಯಮಬಾಗ್ ವಾಲ್ಮೀಕಿನಗರದ ರಾಮಪ್ಪ ಅಲಿಯಾಸ್ ರಾಮ, ಬಸಪ್ಪ ಅಲಿಯಾಸ್ ವಾಂಡ ಬಸ್ಯಾ, ಜೈತುನ ಮಾಳದ ಸಂತೋಷ ಅಲಿಯಾಸ್ ಸಂತ್ಯಾ ಹಾಗೂ ಚನ್ನಮ್ಮನಗರ ರಾಮೇಶ್ವರ ಗಲ್ಲಿಯ ಸುನೀಲ ತೋಟಗಿ ಬಂಧಿತ ಆರೋಪಿಗಳು.
ತಾಲ್ಲೂಕಿನ ಕಬಲಾಪುರ ಕ್ರಾಸ್ ಬಳಿ ಸಲಿಗೆ ಮಾಡಿದ ಬಗ್ಗೆ ಮಂಜುನಾಥಸ್ವಾಮಿ ದೇಗಾವಿಮಠ ಎನ್ನುವವರು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಇನ್ಸ್ಪೆಕ್ಟರ್ ವಿಜಯಕುಮಾರ ಸಿನ್ನೂರ, ಪಿಎಸ್ಐ ಎಲ್.ಎಸ್. ಕರಿಗೌಡರ, ಎಎಸ್ಐ ಬಿ.ಎಸ್. ನಾವಲಗಿ ಹಾಗೂ ಸಿಬ್ಬಂದಿ ಬೆಳಗಾವಿ-ಗೋಕಾಕ ರಸ್ತೆಯ ಕರಿಕಟ್ಟಿ ಬಸವಣ್ಣ ದೇವರ ಗುಡಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
‘ಕಬಲಾಪುರ ಕ್ರಾಸ್ ಹತ್ತಿರ ಕಳವು, ಹೊನ್ನಿಹಾಳ ಕ್ರಾಸ್ನಲ್ಲಿ ಹಗಲು ಮನೆ ಕಳವು, ತೀರ್ಥಕುಂಡೆಯಲ್ಲಿ ಹಗಲು ಮನೆ ಕಳವು, ಮೋದಗಾದಲ್ಲಿ ರಾತ್ರಿ ಮನೆ ಕಳವು, ಉದ್ಯಮಬಾಗ್ನಲ್ಲಿ ದ್ವಿಚಕ್ರವಾಹನ ಕಳವು, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ದ್ವಿಚಕ್ರವಾಹನಗಳು, ಕ್ಯಾಂಪ್ ಠಾಣೆ ವ್ಯಾಪ್ತಿಯಲ್ಲಿ ಒಂದು ಆಟೊರಿಕ್ಷಾ ಕಳವು ಮಾಡಿದ ಬಗ್ಗೆ ವಿಚಾರಣೆ ವೇಲೆ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ತಂಡವನ್ನು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ಪ್ರಶಂಸಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.