ADVERTISEMENT

ಬೆಳಗಾವಿ: ಇಂದು ಗಾಂಧಿ ಭವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 2:45 IST
Last Updated 27 ಜೂನ್ 2022, 2:45 IST
ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಗಾಂಧಿ ಭವನದ ಹೊರನೋಟ
ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಗಾಂಧಿ ಭವನದ ಹೊರನೋಟ   

ಬೆಳಗಾವಿ: ತಾಲ್ಲೂಕಿನ ಪೀರನವಾಡಿಯಲ್ಲಿ ಹಚ್ಚ ಹಸಿರಿನ ಪರಿಸರದಲ್ಲಿ ತಲೆ ಎತ್ತಿದ ಭವ್ಯವಾದ ಗಾಂಧಿ ಭವನ ಜೂ.27ರಂದು(ಸೋಮವಾರ) ಲೋಕಾರ್ಪಣೆಗೊಳ್ಳಲಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಈ ಕಟ್ಟಡವನ್ನು ಸಂಜೆ‌ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು. ದಕ್ಷಿಣ ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸುವರು.

ಏನೀದರ ವಿಶೇಷ?: ₹3 ಕೋಟಿ ವೆಚ್ಚದಲ್ಲಿ ಎರಡು ಎಕರೆಯಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಇದರಲ್ಲಿ ಧ್ಯಾನ, ಪ್ರಾರ್ಥನೆಗೆ ಅನುಕೂಲವಾಗುವಂತೆ 100ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಸಭಾಂಗಣವಿದೆ.

ADVERTISEMENT

‘ಗಾಂಧಿ ಅವರ ಹೋರಾಟದ ಬದುಕು, ಸತ್ಯದ ಅನ್ವೇಷಣೆ, ಅಹಿಂಸಾ ಮಾರ್ಗದ ಜೀವನದ ವಿವಿಧ ಮಗ್ಗುಲುಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಪರಿಚಯಿಸಲು ಪ್ರದರ್ಶನ ಕೊಠಡಿ ನಿರ್ಮಿಸಲಾಗಿದೆ. ಗಾಂಧೀಜಿ ಸಮಗ್ರ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಪುಸ್ತಕಗಳು ಮತ್ತು ಸಂಶೋಧನಾ ಕೃತಿಗಳನ್ನು ಜನರಿಗೆ ಸುಲಭವಾಗಿ ದೊರಕಿಸುವುದಕ್ಕಾಗಿ ಕಿರು ಗ್ರಂಥಾಲಯ ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಭವನದ ಹೊರ ಆವರಣದಲ್ಲಿ ಗಾಂಧಿ ಅವರ ಧ್ಯಾನಸ್ಥ ಬೃಹತ್ ಪುತ್ಥಳಿ, ಪ್ರವೇಶದ್ವಾರದ ಎದುರಿನಲ್ಲಿ ಇನ್ನೊಂದು ಕಂಚಿನ ಪುತ್ಥಳಿ ಸ್ಥಾಪಿಸಲಾಗಿದೆ. ಆವರಣದ ಇನ್ನೊಂದು ಬದಿಯಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆಯ ದೃಶ್ಯವನ್ನು ಪ್ರತಿಬಿಂಬಿಸುವ ಆಕರ್ಷಕ ಪುತ್ಥಳಿ ತಲೆ ಎತ್ತಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ತಿಳಿಸಿದ್ದಾರೆ.

‘ಶಾಸಕ ಅಭಯ ಪಾಟೀಲ ಅವರ ಮುತುವರ್ಜಿಯಿಂದ ಸುಂದರವಾದ ಗಾಂಧಿ ಭವನ ತಲೆ ಎತ್ತಿದೆ. ಇಲ್ಲಿ ವರ್ಷವಿಡೀ ವಿವಿಧ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.