
ಗೋಕಾಕ: ದೇಸಿ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ಸ್ವಾಭಿಮಾನಿ ಭಾರತ ನಿರ್ಮಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಬಿಜೆಪಿಯ ಬೆಳಗಾವಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸುಭಾಸ ಪಾಟೀಲ ಹೇಳಿದರು.
ಸೋಮವಾರ ಇಲ್ಲಿನ ನಗರಸಭೆ ಸಮುದಾಯ ಭವನದಲ್ಲಿ ಗೋಕಾಕ ಮತಕ್ಷೇತ್ರದ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಆತ್ಮನಿರ್ಭರ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ‘ಮೇಕ್ ಇನ್ ಇಂಡಿಯಾʼ ಮತ್ತು ʼಆತ್ಮ ನಿರ್ಭರ ಭಾರತʼ ಮಿಷನ್ಗಳ ಮೂಲಕ ಪ್ರಮುಖ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಆರಿಸಿಕೊಳ್ಳುವ ಮೂಲಕ, ಭಾರತೀಯ ಉದ್ಯಮಗಳು, ಕುಶಲ-ಕರ್ಮಿಗಳನ್ನು ಬೆಂಬಲಿಸುವ ಮೂಲಕ ನಾವು ಬಲಿಷ್ಠವಾದ ಹಾಗೂ ಸ್ವಾವಲಂಬಿ ಭಾರತ ನಿರ್ಮಿಸಲು ಶ್ರಮಿಸಬೇಕಿದೆ. ಲಕ್ಷಾಂತರ ಭಾರತೀಯರೆಲ್ಲರೂ ಜೊತೆಗೂಡಿ ಸ್ವದೇಶಿತನವನ್ನು ಅಳವಡಿಸಿಕೊಳ್ಳಿ ಮತ್ತು ರಾಷ್ಟ್ರವನ್ನು ಸ್ವಾವಲಂಬಿಯಾಗಿ ಮಾಡಿ ಎಂಬ ಸಲಹೆ ನೀಡಿದರು.
ಆತ್ಮ ನಿರ್ಭರ ಭಾರತದ ಪ್ರಚಾರ ಸಾಮಗ್ರಿಗಳನ್ನು ಶಾಸಕ ರಮೇಶ ಜಾರಕಿಹೊಳಿ ಬಿಡುಗಡೆಗೊಳಿಸಿದರು. ಮನೆ-ಮನೆಗೆ ಸ್ಟಿಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ರಾಷ್ಟ್ರೀಯ ಒಬಿಸಿ ಮೋರ್ಚಾದ ಲಕ್ಷ್ಮಣ ತಪಸಿ, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಶಕೀಲ್ ಧಾರವಾಡಕರ, ಜಿಲ್ಲಾ ಘಟಕದ ಉಪಾಧ್ಯಕ್ಷ ಶಾಮಾನಂದ ಪೂಜೇರಿ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಎಲ್.ಎಸ್. ಕೋಲಕಾರ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ವಡೆಯರ, ಮಹಾಂತೇಶ ತಾಂವಶಿ, ಬಸವರಾಜ ಹಿರೇಮಠ, ಮಾಣಿಕ ಈರಟ್ಟಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಆನಂದ ಅತ್ತುಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.