ಮೂಡಲಗಿ: ಈ ಬಾರಿ ಮುಂಗಾರು ಪೂರ್ವದಲ್ಲಿ ಮತ್ತು ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿದಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ. ಕಳೆದ ಮೂರು ವಾರಗಳಿಂದ ಇಲ್ಲಿನ ಜಾನುವಾರು ಪೇಟೆಗೆ ಎಮ್ಮೆ, ಎತ್ತುಗಳ ಖರೀದಿಗಾಗಿ ವಿವಿಧೆಡೆಯಿಂದ ರೈತರು ಲಗ್ಗೆ ಇಟ್ಟಿದ್ದಾರೆ.
ಖಿಲಾರಿ ಎತ್ತುಗಳ ಮಾರಾಟಕ್ಕೆ ಮೂಡಲಗಿಯ ಜಾನುವಾರು ಪೇಟೆ ದಕ್ಷಿಣ ಭಾರತದಲ್ಲೇ ಖ್ಯಾತಿ ಗಳಿಸಿದೆ. ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ರೈತರೂ ಖರೀದಿಗೆ ಇದನ್ನೇ ನೆಚ್ಚಿಕೊಂಡಿದ್ದಾರೆ.
ಪ್ರತಿ ಭಾನುವಾರ ದನಗಳ ಸಂತೆ ನಡೆಯುವ ಈ ಪೇಟೆಗೆ ಕಾಲಿಟ್ಟರೆ ಸಾಕು. ಒಂದೆಡೆ ವಿವಿಧ ಜಾತಿಗಳ ಎಮ್ಮೆಗಳ ಸಾಲು, ಇನ್ನೊಂದೆಡೆ ಖಿಲಾರಿ ಎತ್ತು, ಹೋರಿಗಳ ಕಲರವ ಕಂಡುಬರುತ್ತಿದೆ. ಜವಾರಿ ಮತ್ತು ಎಚ್ಎಫ್ ತಳಿಗಳ ಹಸುಗಳನ್ನು ಮಾರಾಟಕ್ಕಾಗಿ ಸಾಲು ಸಾಲಾಗಿ ನಿಲ್ಲಿಸಲಾಗಿದೆ. ರೈತರು ಎಮ್ಮೆಗಳ ತಳಿ, ಕೆಚ್ಚಲು, ಅವುಗಳ ನಡಿಗೆ ಪರಿಶೀಲಿಸಿ, ಖರೀದಿಗಾಗಿ ಚೌಕಾಸಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
‘ವಿವಿಧ ತಳಿಗಳ ಎಮ್ಮೆಗಳು ಖರೀದಿಗಾಗಿ ಒಂದೇ ಸೂರಿನಡಿ ಇಲ್ಲಿ ಸಿಗುವುದು ವಿಶೇಷ. ಕಳೆದ ಭಾನುವಾರ(ಜೂನ್ 22ರಂದು) ಮುರ್ರಾ ಎಮ್ಮೆ ₹85 ಸಾವಿರದಿಂದ ₹1.50 ಲಕ್ಷಕ್ಕೆ, ಮಶಾಳ ಜಾಪ್ರಿ ಎಮ್ಮೆ ₹1 ಲಕ್ಷದಿಂದ ₹2 ಲಕ್ಷಕ್ಕೆ, ಜವಾರಿ ಎಮ್ಮೆ ₹55 ಸಾವಿರದಿಂದ ₹80 ಸಾವಿರಕ್ಕೆ, ಪಂಢರಪುರಿ ಗವಳಿ ಎಮ್ಮೆ ₹70 ಸಾವಿರದಿಂದ ₹1 ಲಕ್ಷಕ್ಕೆ ಬಿಕರಿಯಾದವು. ಕರ್ನಾಲಿ ಎಮ್ಮೆಗಳಿಗೂ ಬೇಡಿಕೆ ಇದ್ದು, ₹1.10 ಲಕ್ಷಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ’ ಎಂದು ವ್ಯಾಪಾರಿಗಳು ಹೇಳಿದರು.
‘ಮೂಡಲಗಿ ದನಗಳ ಸಂತೆಯಲ್ಲಿ ಮುರ್ರಾ, ಮಶಾಳ ಜಾಪ್ರಿ, ಜವಾರಿ, ಪಂಢರಪುರಿ ಗವಳಿ ಮತ್ತು ಕರ್ನಾಲಿ ಜಾತಿಗಳ ಎಮ್ಮೆಗಳು ಹೆಚ್ಚಾಗಿ ಮಾರಾಟಕ್ಕೆ ಇರುತ್ತವೆ’ ಎಂದು ವ್ಯಾಪಾರಿ ಪ್ರಭು ಬಂಗೆನ್ನವರ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಕಾರ ಹುಣ್ಣಿಮೆ ಮುಗಿದ ನಂತರ, ರೈತರು ಎತ್ತುಗಳನ್ನು ಖರೀದಿಸುತ್ತಾರೆ. ಈ ಸಲ ಉತ್ತಮ ಮಳೆಯಾದ ಕಾರಣ, ಹೆಚ್ಚಿನವರು ಎತ್ತುಗಳ ಖರೀದಿಗೆ ಒಲವು ತೋರಿದ್ದಾರೆ’ ಎಂದು ವ್ಯಾಪಾರಿ ಲಕ್ಕಪ್ಪ ತಟಗಾರ ಹೇಳಿದರು.
‘ಕಳೆದ ವಾರ ಮೂರು ಜೋಡಿ ಎತ್ತು ಮಾರಾಟ ಮಾಡೇನ್ರೀ. ಜೋಡಿ ಖಿಲಾರಿ ಎತ್ತುಗಳಿಗೆ ₹1.60 ಲಕ್ಷದಿಂದ ₹1.70 ಲಕ್ಷದವರೆಗೆ ದರ ಸಿಕ್ಕಿದೆ’ ಎಂದು ತಿಳಿಸಿದರು.
ಒಂದೇ ಸೂರಿನಡಿ ವಿವಿಧ ತಳಿಗಳ ಎಮ್ಮೆಗಳ ಮಾರಾಟ ಗಮನಸೆಳೆಯುವ ಖಿಲಾರಿ ಎತ್ತುಗಳು ಪೇಟೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಒತ್ತಾಯ
‘ಇಲ್ಲ’ಗಳ ತಾಣವಾದ ಪೇಟೆ ಈ ಪೇಟೆ ಆವರಣದಲ್ಲಿ ಹಲವು ವರ್ಷಗಳಿಂದ ಕಸಕಂಟಿ ಬೆಳೆದಿದ್ದು ಜಾನುವಾರುಗಳನ್ನು ಕಟ್ಟಲು ತೊಂದರೆಯಾಗಿದೆ. ಕಂಟಿಗಳಲ್ಲಿ ಹಂದಿಗಳು ವಾಸಿಸುತ್ತಿದ್ದು ದುರ್ವಾಸನೆ ಹರಡುತ್ತಿದೆ. ಇಲ್ಲಿ ವಿದ್ಯುತ್ ದೀಪಗಳಿಲ್ಲ. ರೈತರಿಗೆ ಶೌಚಗೃಹಗಳಿಲ್ಲ. ವಸತಿಗಾಗಿ ರೈತ ಭವನ ಇಲ್ಲ. ಎಲ್ಲೆಂದರಲ್ಲಿ ಮದ್ಯದ ಬಾಟಲಿ ಪ್ಲಾಸ್ಟಿಕ್ ಗ್ಲಾಸ್ ಬಿದ್ದಿದ್ದು ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆದಿವೆ. ರೈತರೇ ಪರಿಸರ ಸ್ವಚ್ಛಗೊಳಿಸಿ ತಮ್ಮ ದನಗಳನ್ನು ಮಾರಾಟಕ್ಕೆ ನಿಲ್ಲಿಸುವ ಅನಿವಾರ್ಯತೆ ಇದೆ. ‘ದನದ ಪ್ಯಾಟ್ಯಾಗಿನ ಕಂಟಿ ತಗಸಬೇಕ್ರಿ. ಇದು ಶೆರೆ ಕುಡಿಯೋ ಜಾಗಾ ಆಗೇತ್ರಿ. ಅದನ್ನ ಬಂದ್ ಮಾಡಬೇಕ್ರಿ’ ಎಂದು ನಾಗನೂರಿನ ರೈತ ಸಿದ್ದಪ್ಪ ಪಡದಲ್ಲಿ ಮತ್ತು ಕಂಕಣವಾಡಿಯ ರೈತ ಲಕ್ಕಪ್ಪ ನಿಪ್ಪಾಣಿ ಬೇಸರದಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.