ADVERTISEMENT

ಸರ್ಕಾರಿ ಶಾಲೆ ಮಕ್ಕಳಿಗೆ ಕೀಳರಿಮೆ ಬೇಡ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 13:07 IST
Last Updated 9 ಜುಲೈ 2025, 13:07 IST
<div class="paragraphs"><p>ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದ್ರೆಮನಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಸಚಿವೆ ಲಕ್ಷ್ಮಿ  ಹೆಬ್ಬಾಳಕರ ಬುಧವಾರ ಉದ್ಘಾಟಿಸಿದರು.</p></div>

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದ್ರೆಮನಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಬುಧವಾರ ಉದ್ಘಾಟಿಸಿದರು.

   

ಬೆಳಗಾವಿ: ‘ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ದೇಶಕ್ಕೆ ಮಹತ್ತರವಾದ ಮೊಡುಗೆ ನೀಡುವಂಥ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕರೆ ನೀಡಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದ್ರೇಮನಿ ಮತ್ತು ಬೆಕ್ಕಿನಕೇರಿಯಲ್ಲಿ ಬುಧವಾರ ಶಾಲಾ ಕೊಠಡಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ನನ್ನ ಕ್ಷೇತ್ರದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಕ್ಷೇತ್ರದ ಭವಿಷ್ಯ ಶಿಕ್ಷಣದ ಮೇಲೆ ಅವಲಂಬಿಸಿದೆ. ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ರಾಜ್ಯಕ್ಕೆ, ರಾಷ್ಟ್ರಕ್ಕೆ ಹೇಸರು ತರಬೇಕು’ ಎಂದೂ ಕಿವಿಮಾತು ಹೇಳಿದರು.

‘ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತಿದ್ದೇನೆ. ಕೆಂಪು ಬಸ್‌ನಲ್ಲಿ ಓಡಾಡಿದ್ದೇನೆ. ಇಂದು ರಾಜ್ಯದ ಮಂತ್ರಿಯಾಗಿದ್ದೇನೆ. ಸರ್ಕಾರಿ ಶಾಲೆ ಸೇರಿದ್ದೇವೆ ಎಂದರೆ ಹೆಮ್ಮೆ ಪಡೆಬೇಕೆ ಹೊರತು; ಕೀಳರಿಮೆ ಪಡಬಾರದು. ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇಂದು ದೊಡ್ಡ ಸಾಧನೆ ಮಾಡಿವರು, ದೊಡ್ಡ ಹುದ್ದೆಯಲ್ಲಿ ಇರುವವರೆಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ಆಗಿದ್ದಾರೆ’ ಎಂದೂ ಅವರು ಹೇಳಿದರು.

‘ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಕೊಟ್ಯಂತರ ರೂಪಾಯಿಗಳ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ, ಮಂದಿರ, ಗಟಾರು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಆರೋಗ್ಯ ಕೆಲಸಗಳಿಗೂ ಒತ್ತು ನೀಡಿದ್ದೇನೆ’ ಎಂದು ಸಚಿವೆ ತಿಳಿಸಿದರು.

ಉದ್ಘಾಟನೆ: ಕುದ್ರೆಮನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಯನ್ನು ಸಚಿವೆ ಬುಧವಾರ ಉದ್ಘಾಟಿಸಿದರು. ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಯುವರಾಜ ಕದಂ, ಎಸ್.ಡಿ.ಎಂ.ಸಿ ಅಧ್ಯಕ್ಷ ಪರಶುರಾಮ ತುರಕೆವಾಡಿಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಾಯಕ ಪಾಟೀಲ, ಸದಸ್ಯರು ಕೂಡ ಹಾಜರಿದ್ದರು.

ನಂತರ ಬೆಕ್ಕಿನಕೇರಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹33.10 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ, 2 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಇದೇ ಗ್ರಾಮದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಸಹ ಉದ್ಘಾಟಿಸಿದರು.

ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಹ ಸಚಿವೆ ಸಸಿಗಳನ್ನು ನೆಟ್ಟರು.

ಮುಖಂಡರಾದ ಗಜಾನನ ಮೋರೆ, ಶಿವಾಜಿ ಕಾಗಣಿಕರ್, ಕಲ್ಲಪ್ಪ ಬಾತ್ಕಂಡೆ, ಮಾರುತಿ ಕಾದರವಾಡ್ಕರ್, ನಾಗೇಶ ಬಾಳೇಕುಂದ್ರಿ, ಮೋಹನ್ ಪವಾರ್, ಜಯವಂತ ಬಾಳೇಕುಂದ್ರಿ, ಪಿಡಿಒಗಳಾದ ಚಂದರಗಿ, ಚಂಬಾ ಕಾಂಬಳೆ, ಬಿ‌ಇಒ ಎಂ‌‌‌.ಎಸ್.ಮೇದಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.