ಸವದತ್ತಿ: ಶಿಂದೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಶಾಲೆ ಹತ್ತಿರ ರಸ್ತೆಯ ಮೇಲೆ ನೀರು ನಿಲ್ಲುತ್ತಿರುವ ಕುರಿತು ಪಿಡಿಒಗೆ ತಿಳಿಸಿದಾಗ ಪಕ್ಕದಲ್ಲಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಏಕಾಏಕಿ ಹಲ್ಲೆ ನಡೆಸಿದ ಘಟನೆ ಈಚೆಗೆ ನಡೆದಿದೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಕೆಎಂಎಫ್ ಕಚೇರಿ ಹತ್ತಿರ ಪಿಡಿಒ ರಮೇಶ ಬೆಡಸೂರ ಹಾಗೂ ಗ್ರಾ.ಪಂ. ಅಧ್ಯಕ್ಷ ಡಿ.ಡಿ. ಟೋಪೋಜಿ ನಿಂತಿದ್ದರು. ಗ್ರಾಮಸ್ಥ ಹನಮಂತ ಯಲ್ಲಪ್ಪ ಕರೀಕಟ್ಟಿ (30) ಇವರು ಶಾಲೆ ಹತ್ತಿರ ರಸ್ತೆ ಮೇಲೆ ನೀರು ನಿಲ್ಲುತ್ತಿದ್ದು ಮಕ್ಕಳಿಗೆ ಸಮಸ್ಯೆಯಾಗುತಿರುವುದನ್ನು ಪಿಡಿಓ ಅವರಿಗೆ ವಿವರಿಸಿ ದುರಸ್ತಿಗೆ ತಿಳಿಸುತ್ತಿರುವಾಗ ಗ್ರಾ.ಪಂ. ಅಧ್ಯಕ್ಷ ದುರ್ಗಪ್ಪ ದ್ಯಾಮಪ್ಪ ಟೋಪೋಜಿ ಇವರು ಏಕಾಏಕಿ ಚಪ್ಪಲಿಯಿಂದ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಧ್ಯಕ್ಷನೊಂದಿಗೆ ಮಂಜುನಾಥ ಬೆಹರೆ, ರಾಜು ಬೆಹರೆ ಸಹಿತ ಸೇರಿ ಹನಮಂತನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ.
ನಂತರ ಹನುಮಂತ ತನ್ನ ಅಜ್ಜಿ ಗಂಗವ್ವ ಬಾಂಗಿ ಜೊತೆ ಮನೆಯಲ್ಲಿದ್ದಾಗ ಈ ಆರೋಪಿಗಳು ಅತಿಕ್ರಮಣವಾಗಿ ಪ್ರವೇಶಿಸಿ ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ. ಜೊತೆಗೆ ಮತ್ತಿಬ್ಬರು ಆರೋಪಿಗಳಾದ ಮುತ್ತಪ್ಪ ಟೋಪೋಜಿ, ರುಕ್ಮವ್ವ ಯಕ್ಕೇರಿ ಸೇರಿ ಅಜ್ಜಿ ಗಂಗವ್ವಳ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಕೊನೆಗೆ ಆರೋಪಿ ಡಿ.ಡಿ. ಟೋಪೋಜಿ ಹನಮಂತನ ಬೆನ್ನಿಗೆ ಹಲ್ಲಿನಿಂದ ಕಚ್ಚಿ ಗಾಯಪಡಿಸಿದ್ದಾನೆ.
ಇದಲ್ಲದೇ ರಾತ್ರಿ ವೇಳೆ ಆರೋಪಿತರೆಲ್ಲರೂ ಹನಮಂತನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆಂದು ಸವದತ್ತಿಯ ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಸಮಸ್ಯೆಯನ್ನು ಅಧಿಕಾರಿಗೆ ತಿಳಿಸಲು ಬಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಗ್ರಾಮಸ್ಥ ಹನಮಂತ ರಸ್ತೆ ಮೇಲೆ ನೀರು ನಿಲ್ಲು ಸಮಸ್ಯೆ ತಿಳಿಸಿದಾಗ ಸರಿಪಡಿಸುವದಾಗಿ ತಿಳಿಸಿ ಪೂರ್ವ ನಿಯೋಜಿತ ಕಾರ್ಯಕ್ರಮದ ಕುರಿತು ರಾಮದುರ್ಗಕ್ಕೆ ತೆರಳಿದೆನು. ಬಳಿಕವಷ್ಟೆ ಈ ಘಟನೆ ಜರುಗಿದ್ದು ಮಾಹಿತಿಯಿಲ್ಲ
ರಮೇಶ ಬೆಡಸೂರ, ಪಿಡಿಒ ಶಿಂದೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.