ADVERTISEMENT

ಅರಟಾಳ: ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 8:45 IST
Last Updated 19 ಜನವರಿ 2022, 8:45 IST
ಅರಟಾಳದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಏಕನಾಥ ಕಾಂಬಳೆ ಮಾತನಾಡಿದರು
ಅರಟಾಳದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಏಕನಾಥ ಕಾಂಬಳೆ ಮಾತನಾಡಿದರು   

ತೆಲಸಂಗ: ಅರಟಾಳ ಗ್ರಾಮ ಪಂಚಾಯ್ತಿಯಿಂದ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಜನರು ಗ್ರಾಮ ಲೆಕ್ಕಾಧಿಕಾರಿ ವಿರುದ್ದ ಆರೋಪಗಳ ಸುರಿಮಳೆಗೈದರು.

ಶಿವಾನಂದ ಭಂಡಾರಿ, ಅಶೋಕ ಆನಗೊಂಡಿ, ಭೀಮಪ್ಪ ಭಂಡಾರಿ ಮಾತನಾಡಿ, ‘ಗ್ರಾಮ ಲೆಕ್ಕಾಧಿಕಾರಿ ಇರ್ಫಾನ್‌ ಆಲಗೂರ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ. ಆಸ್ತಿಗೆ ಸಂಬಂಧಿಸಿದ ಕೆಲಸಕ್ಕೆ ₹ 10ಸಾವಿರದಿಂದ ₹ 15ಸಾವಿರ ಲಂಚ ಕೇಳುತ್ತಾರೆ. ಅವರನ್ನು ವರ್ಗಾಯಿಸಿ ದಕ್ಷ ಅಧಿಕಾರಿ ಹಾಕಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮ ಲೆಕ್ಕಾಧಿಕಾರಿಯಿಂದ ಯಾವುದೇ ದಾಖಲಾತಿ ಪಡೆಯಲು ರೈತರು ಹರಸಾಹಸ ಪಡಬೇಕಾಗಿದೆ. ಹಣ ಕೊಡದಿದ್ದರೆ ಇಲ್ಲಸಲ್ಲದ ದಾಖಲಾತಿ ಬೇಕೆಂದು ಹೇಳಿ ಅಲೆದಾಡಿಸುತ್ತಾರೆ. ಜನರನ್ನು ಸೌಜನ್ಯದಿಂದ ಮಾತನಾಡಿಸುವುದಿಲ್ಲ’ ಎಂದು ಆರೋಪಿಸಿದರು.

ADVERTISEMENT

ದನಿಗೂಡಿಸಿದ ಗ್ರಾ.ಪಂ. ಸದಸ್ಯ ಏಕನಾಥ ಕಾಂಬಳೆ, ‘ಇಂತಹ ಅಧಿಕಾರಿಗಳು ನಮಗೆ ಬೇಡ’ ಎಂದರು.

‘ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸಬೇಕು. ಅರಟಾಳ– ಬಾಡಗಿ– ಹಾಲಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ನ ಅನಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಆ ಅಧಿಕಾರಿ ವರ್ಗಾವಣೆ ಮಾಡುವಂತೆ ಗ್ರಾಮ ಪಂಚಾಯ್ತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ನೋಡಲ್ ಅಧಿಕಾರಿ ಮಹಾಂತೇಶ ಪಾಟೀಲ ಮಾತನಾಡಿದರು. ಪಿಡಿಒ ಎ.ಜಿ. ಎಡಕೆ, ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಕಾಂಬಳೆ, ಉಪಾಧ್ಯಕ್ಷೆ ಕಾಶಿಬಾಯಿ ಹೊನಗೌಡ, ಸದಸ್ಯ ರಾಮಪ್ಪ ಪೂಜಾರಿ, ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ಶಂಕರ ಕೆಂಚಗೊಂಡ, ರೇವಪ್ಪ ತೇಲಿ, ಸದಾಶಿವ ಹೊನಗೌಡ, ಬಸವರಾಜ ಫಾಟೀಲ, ಎಂ.ಬಿ. ಚಪ್ಪರ, ಎಸ್.ಎಸ್. ಶಿಂಧೂರ, ಶೋಭಾ
ಪರೀಟ, ದುಂಡಪ್ಪ ಮಾಳಿ, ಅಕ್ಷಯಕುಮಾರ ಉಪಾಧ್ಯೆ, ಡಾ.ರಾಜಶ್ರೀ ಹಿರೇಮಠ, ಡಾ.ವಿ.ಎಸ್. ಸಿಂಧೂರ ಇದ್ದರು.

ಆರೋಪ ಸತ್ಯಕ್ಕೆ ದೂರವಾದುದು

ಗ್ರಾಮ ಸಭೆಯಲ್ಲಿ ನಾನು ಉತ್ತರ ಕೊಟ್ಟರೆ ಅವರೊಂದು, ನಾನೊಂದು ಮಾತನಾಡಿ ಸಮಸ್ಯೆ ಆಗುತ್ತಿತ್ತು. ಅದಕ್ಕೆ ಸುಮ್ಮನಿದ್ದೆ. ಲಂಚದ ಆರೋಪ ಸತ್ಯಕ್ಕೆ ದೂರವಾಗಿದೆ.

–ಇರ್ಫಾನ್ ಆಲಗೂರ, ಗ್ರಾಮ ಲೆಕ್ಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.