ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ದಿನವಿಡೀ ಜಿಟಿಜಿಟಿ ಮಳೆ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದ ಕೆರೆಗಳು, ಚರಂಡಿ, ನಾಲಾಗಳು ತುಂಬಿ ಹರಿದಿವೆ. ರಸ್ತೆಗಳ ಮೇಲೆ ನೀರು ಹರಿದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಕಳೆದ 24 ತಾಸಿನಲ್ಲಿ ಬೆಳಗಾವಿಯಲ್ಲಿ 10.1 ಸೆಂ.ಮೀ ಹಾಗೂ ರಾಕ್ಕಸಕೊಪ್ಪದಲ್ಲಿ 17.1 ಸೆಂ.ಮೀ ನಷ್ಟು ಮಳೆಯಾಗಿದೆ. ಇಲ್ಲಿನ ಖಾನಾಪುರ ರಸ್ತೆಯ ಮೇಲೆ ಒಂದೂವರಿ ಅಡಿಗಳಷ್ಟು ನೀರು ನಿಂತುಕೊಂಡಿತ್ತು. ವಡಗಾಂವ, ಶಹಾಪುರ ಗಲ್ಲಿ, ಗಾಂಧಿ ನಗರ, ನೇಕಾರರ ಕಾಲೊನಿ ಹಾಗೂ ತಗ್ಗು ಪ್ರದೇಶಗಳ ಮನೆಯೊಳಗೆ ನೀರು ನುಗ್ಗಿದೆ. ನಗರದ ಹೊರವಲಯದಲ್ಲಿ ಹರಿಯುವ ಮಾರ್ಕಂಡೇಯ ನದಿಯ ಹರಿವು ಹೆಚ್ಚಳವಾಗಿದೆ. ಬಿ.ಕೆ.ಕಂಗ್ರಾಳಿ, ಕಾಕತಿ ಸುತ್ತಮುತ್ತಲಿನ ಹೊಲಗಳಲ್ಲಿ ನೀರು ನುಗ್ಗಿದೆ.
ಹೊರವಲಯದ ಸಾಯಿ ನಗರದಲ್ಲಿ ಬಳ್ಳಾರಿ ನಾಲಾ ಸುತ್ತುವರಿದಿದ್ದರಿಂದ ಶವ ಸಾಗಿಸಲು ಜನರು ಪರದಾಡಿದರು. ಬಸವನ ಕುಡಚಿಯ ಬಸವೇಶ್ವರ ಮತ್ತು ಕಲ್ಮೇಶ್ವರ ದೇವಾಲಯಗಳು ಜಲಾವೃತವಾಗಿವೆ. ದೇವರಾಜ ಅರಸು ಕಾಲೊನಿ, ಕೆ.ಎಚ್.ಬಿ. ಬಡಾವಣೆಯಿಂದ ನೀರು ಬಸವನ ಕುಡಚಿಯ ಮನೆಗಳಿಗೆ ನುಗ್ಗಿದೆ. ಬೆಳಗಾವಿ– ಧಾಮಣೆ ರಸ್ತೆ ಜಲಾವೃತವಾಗಿದೆ. ಧಾಮಣೆ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ರಸ್ತೆ ಹಾನಿ:
ಬಳ್ಳಾರಿ ನಾಲಾ ರಭಸದಿಂದ ಹರಿಯುತ್ತಿದ್ದು, ಮೋದಗಾ ಬಳಿ ಬೆಳಗಾವಿ– ಬಾಗಲಕೋಟೆ ರಸ್ತೆಯ ಅರ್ಧಭಾಗ ಕೊಚ್ಚಿಕೊಂಡು ಹೋಗಿದೆ. ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಂಚರಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.