ADVERTISEMENT

ಹಲವೆಡೆ ಮಳೆ: ಅಂಗಡಿಗಳಿಗೆ ನುಗ್ಗಿದ ನೀರು

ಪೊಲೀಸ್‌ ಉಪಠಾಣೆ ಮುಳುಗಡೆ; ಅಪಾರ್ಟ್‌ಮೆಂಟ್‌ಗಳ ನೆಲಮಹಡಿಗಳೂ ಜಲಾವೃತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 16:22 IST
Last Updated 3 ಆಗಸ್ಟ್ 2022, 16:22 IST
ಮಳೆಯಿಂದಾಗಿ ಬೆಳಗಾವಿಯ ಶಿವಬಸವ ನಗರದ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ನಿಂತಿತ್ತು
ಮಳೆಯಿಂದಾಗಿ ಬೆಳಗಾವಿಯ ಶಿವಬಸವ ನಗರದ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ನಿಂತಿತ್ತು   

ಬೆಳಗಾವಿ: ನಗರದಲ್ಲಿ ಬುಧವಾರ ಸಂಜೆ ಎರಡು ತಾಸಿಗೂ ಹೆಚ್ಚು ಸುರಿದ ಮಳೆಯಿಂದಾಗಿ ಇಲ್ಲಿನ ಹಳೇ ಪಿ.ಬಿ. ರಸ್ತೆಯಲ್ಲಿ ಹಲವು ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿತು. ಅದನ್ನು ಹೊರಹಾಕಲು ವ್ಯಾಪಾರಸ್ಥರು ಹಾಗೂ ನಿವಾಸಿಗಳು ಹರಸಾಹಸಪಟ್ಟರು.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ವರುಣ ಅಬ್ಬರಿಸಿದ್ದರಿಂದ ಹಳೇ ಪಿ.ಬಿ.
ರಸ್ತೆ ಕಾಲುವೆಯಂತಾಯಿತು. ಮೊಣಕಾಲುದ್ದ ನಿಂತಿದ್ದ ನೀರಲ್ಲೇ ಶಾಲಾ–
ಕಾಲೇಜು ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಸಾಗಿದರು. ವಾಹನ ಸವಾರರು ಸರ್ಕಸ್‌ ಮಾಡುತ್ತ ಸಂಚರಿಸುತ್ತಿರುವುದು ಕಂಡುಬಂತು.

ಹಳೇ ಪಿ.ಬಿ. ರಸ್ತೆ ಮೇಲ್ಸೇತುವೆ ಪಕ್ಕದ ಸರ್ವೀಸ್‌ ರಸ್ತೆ, ಹಿಂದವಾಡಿಯ ಕೆಲ ಅಪಾರ್ಟ್‌ಮೆಂಟ್‌ಗಳ ನೆಲ
ಮಹಡಿಗೂ ಮಳೆ ನೀರು ‌ನುಗ್ಗಿದ್ದರಿಂದ ಜನರು ತೊಂದರೆ ಅನುಭವಿಸಿದರು. ಶಿವಬಸವ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ರಸ್ತೆಯಲ್ಲೂ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

ADVERTISEMENT

ಮಳೆಯಿಂದಾಗಿ ಕೇಂದ್ರ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲೂ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದರು. ಖಡೇಬಜಾರ್‌, ಗಣಪತ ಗಲ್ಲಿ, ಮಾರುತಿ ಗಲ್ಲಿ ಸೇರಿ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ–ವಹಿವಾಟಿಗೆ ತೊಡಕಾ
ಯಿತು. ಜನರು ರಸ್ತೆಯ ಇಕ್ಕೆಲ
ಗಳಲ್ಲಿ ಆಶ್ರಯ ಪಡೆದರು. ರಾತ್ರಿಯ
ವರೆಗೂ ಮಳೆ ಮುಂದುವರಿದಿತ್ತು.

ಪೊಲೀಸ್‌ ಉಪಠಾಣೆ ಮುಳುಗಡೆ: ರಾಮದುರ್ಗ ತಾಲ್ಲೂಕಿನ ಸುರೇಬಾನ - ಮನಿಹಾಳ ಗ್ರಾಮದಲ್ಲಿನ ರಸ್ತೆ
ಗಳುಕೆರೆಯಂತಾದವು. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಸುರೇಬಾನ ಪೊಲೀಸ್ ಉಪಠಾಣೆ ಮುಳುಗಡೆಯಾಗಿತ್ತು.

ಗ್ರಾಮದ ಫಲಹಾರ ಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಮಹಾ
ವಿದ್ಯಾಲಯದ ಆಟದ ಮೈದಾನ‌ವೂ ಜಲಾವೃತವಾಗಿತ್ತು. ರಸ್ತೆ ಮೇಲೆ ಅಪಾರ ಪ್ರಮಾಣ ನೀರು ಹರಿದಿದ್ದರಿಂದ ವಾಹನ ಸಂಚಾರರು ಪರದಾಡಿದರು. ವಿದ್ಯಾರ್ಥಿಗಳು ಸೈಕಲ್ ಮೇಲೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.