ಬೆಳಗಾವಿ: ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಜೋರು ಮಳೆ ಹಲವು ಅವಾಂತರ ಸೃಷ್ಟಿಸಿತು. ಕ್ಲಬ್ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಮರಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟರು.
ಕಾಳಿಅಂಬ್ರಾಯಿ ನಿವಾಸಿ ವಿಜಯ ಕೊಲ್ಹಾಪುರೆ (63) ಮೃತ. ಮರದಡಿ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎರಡು ಮರಗಳು ನೆಲಕ್ಕುರುಳಿದ್ದರಿಂದ ಪಾರ್ಕಿಂಗ್ ಸ್ಥಳದಲ್ಲಿದ್ದ 30ಕ್ಕೂ ಹೆಚ್ಚು ದ್ವಿಚಕ್ರವಾಹನಗಳು, ಸೈಕಲ್ ಜಖಂಗೊಂಡಿವೆ. ಇದರಿಂದ ಆ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ವಾಹನಗಳು ಹಾಗೂ ರಸ್ತೆ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು. ದ್ವಿಚಕ್ರವಾಹನಗಳಿಗೆ ಆದ ಹಾನಿ ಕಂಡು ಮಾಲೀಕರು ಕಣ್ಣೀರಿಟ್ಟರು.
ವಿಶ್ವೇಶ್ವರಯ್ಯ ನಗರ ಹಾಗೂ ಲಿಂಗರಾಜ ಕಾಲೇಜು ಹಿಂಭಾಗದ ಪೊಲೀಸ್ ಲೈನ್ನಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿವೆ. ಹಿಂಡಲಗಾ ರಸ್ತೆ, ರಾಣಿ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದ ಬಳಿ, ಕ್ಯಾಂಪ್ನ ಶರ್ಕತ್ ಉದ್ಯಾನ, ಬಿಎಸ್ಎನ್ಎಲ್ ಕಚೇರಿ ಬಳಿ ಸೇರಿದಂತೆ ಹಲವೆಡೆ ಮರಗಳು ಬಿದ್ದಿವೆ. ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.
ರಂಜಾನ್ ಮಾಸದ ಅಂಗವಾಗಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿತ್ತು. ಮಳೆಯಿಂದಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಪರದಾಡುವಂತಾಯಿತು. ಗಾಂಧಿನಗರದ ಹಣ್ಣಿನ ಮಾರುಕಟ್ಟೆ ಮತ್ತು ಸಂಗೊಳ್ಳಿರಾಯಣ್ಣ ವೃತ್ತದ ಆರ್ಟಿಒ ಕಚೇರಿ ಆವರಣ ಜಲಾವೃತವಾಗಿತ್ತು. ಗಾಂಧಿ ನಗರದ ಮೇಲ್ಸೇತುವೆ ಬಳಿ ಸರ್ವಿಸ್ ರಸ್ತೆ ಕಾಲುವೆಯಂತಾಗಿತ್ತು. ಹಳೆಯ ಪಿ.ಬಿ. ರಸ್ತೆಯಲ್ಲೂ ಇದೇ ಸ್ಥಿತಿ ಇತ್ತು.
ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ಗುಡುಗು–ಮಿಂಚು ಸಹಿತ ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.