ADVERTISEMENT

ಅಥಣಿ ಲಯನ್ಸ್ ಕ್ಲಬ್ ಪ್ರಾರಂಭೋತ್ಸವ: ಬಡವರ ಸೇವೆಯೇ ಲಯನ್ಸ್ ಕ್ಲಬ್ ನ ಉದ್ದೇಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:03 IST
Last Updated 29 ಆಗಸ್ಟ್ 2025, 2:03 IST
ಫೋಟೋ ಶೀರ್ಷಿಕೆ : ಅಥಣಿ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೀಡಲಾಯಿತು. (28ಅಥಣಿ 01)
ಫೋಟೋ ಶೀರ್ಷಿಕೆ : ಅಥಣಿ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೀಡಲಾಯಿತು. (28ಅಥಣಿ 01)   

ಅಥಣಿ: ಬಡವರ, ಅಸಹಾಯಕರ, ಅನಾರೋಗ್ಯ ಪೀಡಿತರಿಗಾಗಿ ಸಹಾಯ ಮಾಡುವುದು ಲಯನ್ಸ್ ಕ್ಲಬ್ ಉದ್ದೇಶವಾಗಿವೆ. ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಮಾಜಮುಖಿ ಸೇವೆಗಳಿಂದ ಮನೆ ಮಾತಾಗಿದೆ ಎಂದು 317 ಬಿ ಜಿಲ್ಲಾ ಪ್ರಾಂತುಪಾಲ ಜೈಮೋಲ ನಾಯಿಕ ಹೇಳಿದರು.

ಪಟ್ಟಣದ ರಾಯಲ್ ಭವನದಲ್ಲಿ ಇತ್ತಿಚೇಗೆ ಲಯನ್ಸ್ ಕ್ಲಬ್ ಪ್ರಾರಂಭೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಸನ್ 1917ರಲ್ಲಿ ಅಮೆರಿಕಾದಲ್ಲಿ ಸ್ಥಾಪನೆಯಾಯಿತು. ವಿಶ್ವದ 207 ದೇಶಗಳಲ್ಲಿ 17 ಲಕ್ಷ ಸದಸ್ಯರಿದ್ದಾರೆ. ಭಾರತದಲ್ಲಿ 5 ಸಾವಿರ ಕ್ಲಬ್‍ಗಳು ಸಾಮಾಜಿಕ ಸೇವೆಯಲ್ಲಿ ತೊಡಗಿವೆ.ಒಳ್ಳೆಯ ಯೋಜನೆಗಳಿದ್ದರೆ ಅನುದಾನ ಮಂಜೂರಾತಿಗೆ ಅಂತರರಾಷ್ಟ್ರೀಯ ದೇಣಿಗೆದಾರರಿಗೆ ಕಳುಹಿಸಿ ಕೊಡಲಾಗುವುದು. ಅನುದಾನ ಸದ್ಬಳಕೆಯಾಗಿ ಸಮಾಜಕ್ಕೆ ಒಳ್ಳೆಯದಾಗಬೇಕು. ಕರ್ನಾಟಕದಿಂದ ಬರುವ ಎಲ್ಲ ಯೋಜನೆಗಳಿಗೆ ಅನುದಾನ ದೊರಕಿಸಿಕೊಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಡಾ. ಕೀರ್ತಿ ನಾಯಿಕ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿ ದೇಶ ವಿದೇಶಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸುವ ಅನೇಕ ಸಂಸ್ಥೆಗಳಿವೆ, ಆದರೆ ನಮ್ಮ ಲಯನ್ಸ್ ಸಂಸ್ಥೆಯಲ್ಲಿ ಸದಾ ಕ್ರಿಯಾಶೀಲರಾಗಿ ಜನಪರ ಕಾರ್ಯ ಮಾಡುವ ಉದ್ದೇಶ ಹೊಂದಲಾಗಿದೆ. ಈಗಷ್ಟೇ ಸಮಾಜಮುಖಿ ಸೇವಾ ಮನೋಭಾವನೆಯಿಂದ ಸದಸ್ಯತ್ವ ಹೊಂದಿರುವ ಅಥಣಿ ತಂಡವು ಲಯನ್ ರಮೇಶ ಬುಲೆಬುಲೆ ಅವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ನೂತನ ಸಂಸ್ಥಾಪಕ ಅಧ್ಯಕ್ಷರಾಗಿ ರಮೇಶ ಬುಲಬುಲೆ ಮಾತನಾಡಿ ಲಯನ್ಸ್ ಕ್ಲಬ್ ಕೇವಲ ಒಂದು ಸಂಘಟನೆಯಲ್ಲ, ಇದು ಸ್ನೇಹದ ಸೇತುವೆ ಮತ್ತು ಸಮಾಜಮುಖಿ ಚಟುವಟಿಕೆಗಳ ದ್ವೀಪ ಸ್ತಂಭ. ನಾವೆಲ್ಲರೂ ಸೇವಾ ಮನೋಭಾವನೆಯಿಂದ ಬಡವರಿಗೆ ನೆರವು, ಯುವಶಕ್ತಿಗೆ ಪ್ರೇರಣೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುವ ಸಂಕಲ್ಪ ಹೊಂದಿದ್ದೇವೆ ಎಂದರು.

ನೂತನ ಅಧ್ಯಕ್ಷರಾಗಿ ರಮೇಶ ಬುಲಬುಲೆ, ಕಾರ್ಯದರ್ಶಿಯಾಗಿ ವಿನೋದ ಕಲಮಡಿ, ಖಜಾಂಚಿಯಾಗಿ ಅಶೋಕ ಹೊಸೂರ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.

ಅತಿಥಿಗಳಾಗಿ ಮಹಾಲಿಂಗಪುರದ ಲಯನ್ಸ್ ಕ್ಲಬ್‌ನ ಸಿದ್ದು ನಕಾತಿ, ವಿದ್ಯಾ ದಿನ್ನಿಮನಿ, ಪ್ರಶಾಂತ್ ಅಂಗಡಿ, ರಾಜು ತಾಳಿಕೋಟಿ ಸೇರಿದಂತೆ ಅಥಣಿ ಲಯನ್ಸ್ ಕ್ಲಬ್ ನಿರ್ದೇಶಕರಾದ ಚಿದಾನಂದ ಸವದಿ, ಮಹೇಶ್ ಕಾಪಸೆ, ರವೀಂದ್ರ ಗಾವಡೆ, ಕಿರಣ ಶಿರಗುಪ್ಪಿ, ಶಶಿಕಾಂತ ಹುಲಕುಂದ, ಮಹಾದೇವ ನಾಯಿಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಆನಂದ ಟೋಣಪಿ ಸ್ವಾಗತಿಸಿದರು. ಸಂಜೀವ ಪಾಂಚಾಲ ನಿರೂಪಿಸಿದರು. ವಿನೋದ ಕಲಮಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.