ADVERTISEMENT

ಸರಣಿ ಮನೆಗಳ್ಳತನ; 3 ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:45 IST
Last Updated 4 ಮೇ 2019, 1:45 IST

ಬೆಳಗಾವಿ: ನಗರದಲ್ಲಿ ನಡೆದ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿ, ₹ 8.77 ಲಕ್ಷ ಮೊತ್ತದ ಚಿನ್ನ– ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಸುಮಾರು 10 ಮನೆಗಳಲ್ಲಿ ಸರಣಿ ಮನೆಗಳ್ಳತನ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸೀಮಾ ಲಾಟ್ಕರ್, ಡಿಸಿಪಿ(ಅಪರಾಧ ಮತ್ತು ಸಂಚಾರ) ಯಶೋಧಾ ವಂಟಗೋಡಿ ಅವರು ಸಿಸಿಐಬಿ ಘಟಕ ಹಾಗೂ ನಗರದ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರ ಒಂದು ವಿಶೇಷ ತಂಡವನ್ನು ರಚಿಸಿದರು.

ಭಾಗ್ಯನಗರ, ಅನಗೋಳ ಬಳಿ ಕೆಲವು ವ್ಯಕ್ತಿಗಳು ಸಂಶಯಾಸ್ಪದವಾಗಿ ಅಲೆದಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧರಿಸಿ ವಿಶೇಷ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆರೋಪಿಗಳಾದ ಅನಗೋಳದ ಸಾಯೀದ್ ಇಬ್ರಾಯಿಂ ಲಸ್ಕರವಾಲೆ (21), ಅಬ್ದುಲ್‌ ಘನಿ ಶಬ್ಬೀರ ಶೇಖ (22), ಮಹಮ್ಮದಸಿದ್ದಿಕ್ ರಿಯಾಜಅಹಮ್ಮದ (22) ಅವರನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದರು. ಸರಣಿ ಮನೆಗಳ್ಳತನ ತಾವೇ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡರು.

ADVERTISEMENT

ಟಿಳಕವಾಡಿ ಠಾಣಾ ವ್ಯಾಪ್ತಿಯಲ್ಲಿ 6, ಉದ್ಯಮಬಾಗ, ಮಾರಿಹಾಳ, ಕಾಕತಿ ಮತ್ತು ಹುಕ್ಕೇರಿ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಹೀಗೆ ಒಟ್ಟು 10 ಕಡೆ ಮನೆಗಳಿಗೆ ಕನ್ನಾ ಹಾಕಿ ₹ 4,85 ಲಕ್ಷ ಮೌಲ್ಯದ 149 ಗ್ರಾಂ ಚಿನ್ನದ ಆಭರಣಗಳು, ₹ 3.91 ಲಕ್ಷ ಮೌಲ್ಯದ 10 ಕೆ.ಜಿ 70 ಗ್ರಾಂ ತೂಕದ ಬೆಳ್ಳಿ ಆಭರಣಗಳು ಸೇರಿದಂತೆ ಹೀಗೆ ಒಟ್ಟು ₹ 8.77ಲಕ್ಷ ಮೌಲ್ಯದ ಆಭರಣಗಳನ್ನು ಕಳುವು ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಆರೋಪಿಗಳಿಂದ ಚಿನ್ನ, ಬೆಳ್ಳಿಯ ಆಭರಣಗಳ ಸಮೇತ ಒಂದು ಬಜಾಜ್‌ ಪಲ್ಸರ್‌ ಬೈಕ್‌ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಐಬಿ ಪಿ.ಐ ಜಯವಂತ ಎ. ದುಲಾರಿ, ಟಿಳಕವಾಡಿ ಠಾಣೆಯ ಪಿ.ಐ ಎಸ್.ಆರ್. ನಾಯ್ಕ, ಎಎಸ್‌ಐ ಎಂ.ವೈ. ಕಾರಿಮನಿ ಹಾಗೂ ಸಿಬ್ಬಂದಿಯವರಾದ ವಿ.ಡಿ. ಸರನಾಯಕ, ಆರ್.ಎಂ. ಪರಮಾಜ, ಎಸ್.ಎ. ರಾವುತ, ಆರ್.ಎಸ್ ನಾಯಿಕವಾಡಿ, ಎಸ್.ಎಸ್. ಪಾಟೀ, ಎಸ್.ಆರ್ ಮೇತ್ರಿ, ಎಸ್.ಸಿ. ಕೋರೆ, ಬಿ.ಎನ್. ಬಳಗನ್ನವರ, ಎಂ.ಎಂ. ವಡೆಯರ, ಸಿ.ಜೆ.ಚಿನ್ನಪ್ಪಗೋಳ, ಎ.ಕೆ. ಕಾಂಬಳೆ, ಲಕ್ಷ್ಮಣ ಗೂಗಾಡೆ, ಪಿ.ಎಸ್. ಭೂಷಿ, ಆರ್.ಜೆ. ಕೋಳಿ, ಎಂ.ಜಿ. ಮರನಿಂಗಗೋಳ, ಟಿ.ಜಿ.ಸುಳಕೋಡ ಹಾಗೂ ಮಹಾದೇವ ಮಾಂಗ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.