ADVERTISEMENT

15 ಸ್ಥಾನಗಳಲ್ಲೂ ರಮೇಶ ಕತ್ತಿ ಗುಂಪಿಗೆ ಜಯ

ಹುಕ್ಕೇರಿ ವಿದ್ಯುತ್‌ ಸಹಕಾರ ಸಂಘದ ಚುನಾವಣೆ: ಜಾರಕಿಹೊಳಿ, ಜೊಲ್ಲೆ ದೋಸ್ತಿಗೆ ತೀವ್ರ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:58 IST
Last Updated 30 ಸೆಪ್ಟೆಂಬರ್ 2025, 6:58 IST
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವನೆಯಲ್ಲಿ ಕತ್ತಿ– ಪಾಟೀಲ ಪೆನೆಲ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ (ಸ್ವಾಭಿಮಾನಿ ಪೆನಲ್ ಮುಖ್ಯಸ್ಥ) ಜತೆ ಸೋಮವಾರ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವನೆಯಲ್ಲಿ ಕತ್ತಿ– ಪಾಟೀಲ ಪೆನೆಲ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ (ಸ್ವಾಭಿಮಾನಿ ಪೆನಲ್ ಮುಖ್ಯಸ್ಥ) ಜತೆ ಸೋಮವಾರ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ   

ಹುಕ್ಕೇರಿ: ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಐದು ವರ್ಷದ ಅವಧಿಗೆ ಜರುಗಿದ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳನ್ನೂ ರಮೇಶ ಕತ್ತಿ, ಎ.ಬಿ.ಪಾಟೀಲ ಹಾಗೂ ಶಾಸಕ ನಿಖಿಲ್‌ ಕತ್ತಿ ನೇತೃತ್ವದ ಸ್ವಾಭಿಮಾನಿ ಪೆನಲ್‌ ಗೆದ್ದುಕೊಂಡಿದೆ.

ಒಂದು ತಿಂಗಳಿಂದ ಹುಕ್ಕೇರಿಯಲ್ಲೇ ಬೀಡುಬಿಟ್ಟಿದ್ದ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ಭಾನುವಾರ ನಡೆದ ಚುನಾವಣೆ ವೇಳೆ ಶೇ 67.54ರಷ್ಟು ಮತದಾನವಾಗಿದ್ದು, ಸೋಮವಾರ ನಸುಕಿನ 3 ಗಂಟೆಯವರೆಗೂ ಮತ ಎಣಿಕೆ ನಡೆಯಿತು. ಒಂದೊಂದೇ ಕ್ಷೇತ್ರದ ವಿಜೇತರ ಹೆಸರನ್ನು ಹೇಳುತ್ತಿದ್ದಂತೆಯೇ ಕತ್ತಿ ಕುಟುಂಬದ ಬೆಂಬಲಿಗರು ಇನ್ನಿಲ್ಲದ ಉತ್ಸಾಹದಿಂದ ಚೀರಾಟ, ಕುಣಿದಾಟ ನಡೆಸಿದರು. ಬೆಳಿಗ್ಗೆ 7ರ ಹೊತ್ತಿಗೆ ಫಲಿತಾಂಶ ಪೂರ್ಣ ಪ್ರಕಟಿಸಲಾಯಿತು.

ಆರಂಭದಲ್ಲಿ ಮೀಸಲಾತಿ ಕ್ಷೇತ್ರಗಳಾದ ಎಸ್.ಸಿ, ಎಸ್ಟಿ, ಒಬಿಸಿ ಹಾಗೂ ಮಹಿಳಾ ಮೀಸಲು ಸ್ಥಾನಗಳ ಫಲಿತಾಂಶಗಳು ಹೊರಬಿದ್ದವು. ನಂತರ ಸಾಮಾನ್ಯ ಕ್ಷೇತ್ರದಲ್ಲೂ ಎಲ್ಲರೂ ರಮೇಶ್ ಕತ್ತಿ ಗುಂಪಿನವರೇ ನಿರ್ದೇಶಕ ಸ್ಥಾನಗಳನ್ನು ಪಡೆದರು.

ಸಚಿವ ಸತೀಶ, ಶಾಸಕ ಬಾಲಚಂದ್ರ ಸೇರಿ ಹಲವು ಬೆಂಬಲಿಗರೂ ತಡರಾತ್ರಿಯವರೆಗೂ ಮತ ಎಣಿಕೆ ಕೇಂದ್ರದ ಬಳಿಯೇ ಇದ್ದರು. ಆದರೆ, ಮೀಸಲು ಕ್ಷೇತ್ರಗಳಲ್ಲಿ ಅವರ ಪ್ಯಾನಲ್‌ಗೆ ಸೋಲು ಉಂಟಾದಾಗ ಒಬ್ಬೊಬ್ಬರಾಗಿ ಸ್ಥಳಿದಿಂದ ತೆರಳಿದರು. ಸಾಮಾನ್ಯ ಕ್ಷೇತ್ರದ 9 ಸ್ಥಾನಗಳನ್ನು ಗೆಲ್ಲುತ್ತಿದ್ದಂತೆಯೇ ಕತ್ತಿ ಗುಂಪಿನ ಬೆಂಬಲಿಗರು ವಿಜಯೋತ್ಸವ ಆರಂಭಿಸಿದರು. ಎಲ್ಲೆಡೆ ಜನಸಾಗರ ಸೇರಿತ್ತು. ಸಿಳ್ಳೆ, ಕೂಗಾಟ, ಜೈಕಾರ ಮುಗಿಲು ಮುಟ್ಟಿದವು.

ಈ ವೇಳೆ ಮಾತನಾಡಿದ ರಮೇಶ ಕತ್ತಿ, ‘ಹುಕ್ಕೇರಿ ತಾಲ್ಲೂಕಿನ ಜನ ಸ್ವಾಭಿಮಾನಿಗಳು ಎಂದು ಸಾಬೀತು ಮಾಡಿದ್ದಾರೆ. ಅವರು ಮಾನಕ್ಕೆ ಹೆದರುತ್ತಾರೆ ಹೊರತು ಯಾರದೋ ಬೆದರಿಕೆ ನಡೆಯುವುದಿಲ್ಲ. ಹಣದ ಆಮಿಷಕ್ಕೆ ಒಳಗಾಗದೆಯೇ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.

ಕಾರಿಗೆ ಗುದ್ದಿ, ಕಲ್ಲು ತೂರಾಟ: ಫಲಿತಾಂಶ ಬಳಿಕ ಗುಂಪಾಗಿ ಸೇರಿ ಕುಣಿದಾಡಿದ ಕತ್ತಿ ಕುಟುಂಬದ ಬೆಂಗಲಿಗರು ತೀವ್ರ ಚೀರಾಟ, ಕೂಗಾಟ ಶುರು ಮಾಡಿದರು. ಜನಸಂದಣಿಯಿಂದ ದಾಟುತ್ತಿದ್ದ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತರೊಬ್ಬರಿಗೆ ಸೇರಿದ ಕಾರನ್ನು ಕೈಯಿಂದ ಗುದ್ದಿದರು. ಆಚೆಯಿಂದ ಕಲ್ಲೊಂದು ತೂರಿಬಂದು ಪಕ್ಕದಲ್ಲಿ ಬಿದ್ದಿತು. ಆಗ ಪೊಲೀಸರು ಜನರನ್ನು ಚದುರಿಸಿದರು.

ಇವರೇ 15 ವಿಜೇತರು....

ಪ್ರಥ್ವಿ (ಲವ) ರಮೇಶ ಕತ್ತಿ (21880 ಬೆಲ್ಲದ ಬಾಗೇವಾಡಿ ಕ್ಷೇತ್ರ– ರಮೇಶ್ ಕತ್ತಿ ಅವರ ಪುತ್ರ) ಕಲಗೌಡ ಬಸಗೌಡ ಪಾಟೀಲ (20844 ಯಲ್ಲಾಪುರ) ವಿನಯ ಅಪ್ಪಯ್ಯಗೌಡ ಪಾಟೀಲ (19925 ಅಮ್ಮಿನಬಾವಿ– ಎ.ಬಿ.ಪಾಟೀಲರ ಪುತ್ರ) ಶಿವಾನಂದ ಶಿವಪುತ್ರ ಮುಡಶಿ (18719 ಸಂಕೇಶ್ವರ) ಮಹಾವೀರ ವಸಂತ ನಿಲಜಗಿ (18583 ಹುಕ್ಕೇರಿ) ಶಿವನಗೌಡ ಸತ್ಯಪ್ಪ ಮದವಾಲ (18538 ಸುಲ್ತಾನಪೂರ) ಲಕ್ಷ್ಮಣ ಬಸವರಾಜ ಮುನ್ನೋಳಿ (18406 ಹೆಬ್ಬಾಳ) ಕೆಂಪಣ್ಣ ಸಾತಪ್ಪ ವಾಸೇದಾರ (17873 ಹಂಜ್ಯಾನಟ್ಟಿ) ಮಹಾದೇವ ಬಾಬು ಕ್ಷೀರಸಾಗರ (17393 ಸೊಲ್ಲಾಪುರ) ಮೆಹಬೂಬಿ ಗೌಸ್‌ಅಜಂ ನಾಯಿಕವಾಡಿ (19863 ಮಹಿಳಾ ಮೀಸಲು– ಹುಕ್ಕೇರಿ) ಮಂಗಲಾ ಗುರುಸಿದ್ದಪ್ಪ ಮೂಡಲಗಿ (19468 ಮಹಿಳಾ ಮೀಸಲು– ಶಿಂಧಿಹಟ್ಟಿ) ಗಜಾನನ ನಿಂಗಪ್ಪ ಕ್ವಳ್ಳಿ (20427 ಹಿಂದುಳಿದ ವರ್ಗ ಅ ಮೀಸಲು– ಸಂಕೇಶ್ವರ) ಸತ್ಯಪ್ಪ ಭರಮಣ್ಣ ನಾಯಿಕ (18795 ಹಿಂದುಳಿದ ವರ್ಗ ಬ ಮೀಸಲು– ಬೆಳವಿ) ಶ್ರೀಮಂತ ಗಂಗಪ್ಪ ಸನ್ನಾಯಿಕ (20250 ಪರಿಶಿಷ್ಟ ಜಾತಿ ಮೀಸಲು– ಕಣಗಲಾ) ಬಸವಣ್ಣಿ ಸಣ್ಣಪ್ಪ ಲಂಕೆಪ್ಪಗೋಳ (18262 ಪರಿಶಿಷ್ಟ ಪಂಗಡ ಮೀಸಲು– ಗುಟಗುದ್ದಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.