ಬೆಳಗಾವಿ: ‘ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾದರೆ ಖುಷಿಪಡುತ್ತೇನೆ. ನಿಪ್ಪಾಣಿ ಜಿಲ್ಲೆ ರಚನೆಯಾದರಂತೂ ಇನ್ನೂ ಹೆಚ್ಚು ಸಂತೋಷವಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಹಿರಿಯರು, ಮುಖಂಡರು ಹಾಗೂ ಮುಖ್ಯಮಂತ್ರಿ ಜೊತೆ ಚರ್ಚೆ ಆಗಬೇಕು. ಸಾಧಕ-ಬಾಧಕಗಳನ್ನು ಯೋಚಿಸಬೇಕಾಗುತ್ತದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲೆ ವಿಭಜನೆ ಅಗತ್ಯ. ಕನ್ನಡಪರ ಹೋರಾಟಗಾರ ಡಾ.ಪಾಟೀಲ ಪುಟ್ಟಪ್ಪ ಅವರು ಕಾನೂನಾತ್ಮಕವಾಗಿ ಚಿಕ್ಕೋಡಿಗಿಂತ ನಿಪ್ಪಾಣಿಯೇ ಜಿಲ್ಲೆ ಆಗಬೇಕು ಎಂದು ಒಮ್ಮೆ ಹೇಳಿದ್ದರು’ ಎಂದು ಸ್ಮರಿಸಿದರು.
‘ನಾನು ಸಂಪುಟದಲ್ಲಿರುವ ಏಕೈಕ ಸಚಿವೆ. ನನ್ನನ್ನು ಸಂಪುಟದಿಂದ ಬಿಡುವ ಯಾವ ಸೂಚನೆಯೂ ಬಂದಿಲ್ಲ. ಮಾಧ್ಯಮದಲ್ಲಿ ಊಹಾಪೋಹ ಚರ್ಚೆಯಾಗುತ್ತಿದೆ. ಹೆಣ್ಣುಮಕ್ಕಳನ್ನೇ ಏಕೆ ಗುರಿ ಮಾಡುತ್ತೀರಿ?’ ಎಂದು ಕೇಳಿದರು. ‘ನನ್ನನ್ನು ಸಂಪುಟದಿಂದ ತೆಗೆಯುತ್ತಾರೆ ಎನ್ನುವ ಊಹೆ ಸುಳ್ಳಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.