ಬೆಳಗಾವಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೆಳಗಾವಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಈಚೆಗೆ ನಡೆಯಿತು.
ಅಧ್ಯಕ್ಷರಾಗಿ ಡಾ.ಅನಿಲ್ ಪಾಟೀಲ, ಕಾರ್ಯದರ್ಶಿಯಾಗಿ ಡಾ.ದೇವೇಗೌಡ ಮತ್ತು ಖಜಾಂಚಿಯಾಗಿ ಡಾ.ರವೀಂದ್ರ ಅನಗೋಳ ಹಾಗೂ ಆಡಳಿತ ಮಂಡಳಿಯ ಸದಸ್ಯರು ಪದಗ್ರಹಣ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಐಎಂಎ ರಾಜ್ಯ ಮಂಡಳಿ ನಿರ್ದೇಶಕ ಡಾ.ಶಿವಕುಮಾರ ಕುಂಬಾರ ಮಾತನಾಡಿ, ‘ದೇಶದಲ್ಲಿ ಕೊರೊನಾ ಹರಡಿದ ಸಂದರ್ಭದಲ್ಲಿ ಎಲ್ಲ ವೈದ್ಯರೂ ಸಮುದಾಯಕ್ಕೆ ಅಗತ್ಯವಿರುವ ತುರ್ತು ಸೇವೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೆಲ ವೈದ್ಯರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆರೋಗ್ಯ ರಕ್ಷಣೆಯ ಸಂಕಲ್ಪದೊಂದಿಗೆ ಎಲ್ಲರ ಮನದಲ್ಲಿ ಸ್ಥಾನ ಗಳಿಸಿದ್ದಾರೆ’ ಎಂದರು.
ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಮಾತನಾಡಿ, ‘ಐಎಂಎ ಸದಸ್ಯರು ಆಯಾ ಜಿಲ್ಲಾಡಳಿತಗಳೊಂದಿಗೆ ಕೈಜೋಡಿಸಿ ಸೋಂಕು ನಿಯಂತ್ರಣ ಮತ್ತು ರೋಗಿಗಳಿಗೆ ತುರ್ತು ಸೇವೆ ನೀಡಿದ್ದಾರೆ. ಜ್ವರ ನಿಯಂತ್ರಣ ವಾರ್ಡ್ಗಳನ್ನು ಸ್ಥಾಪಿಸುವ ಮೂಲಕ ಸಹಕರಿಸಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಮತ್ತು ಸಕಾಲದಲ್ಲಿ ವೈದ್ಯಕೀಯ ಸೇವೆಗಳನ್ನು ನೀಡಿದ ವೈದ್ಯರು ಅಭಿನಂದನಾರ್ಹರು’ ಎಂದರು.
ಕಾರ್ಯದರ್ಶಿ ದೇವೇಗೌಡ ಮಾತನಾಡಿ, ‘ಸಮುದಾಯದ ಆರೋಗ್ಯ ಉತ್ತಮಗೊಳಿಸುವ ಜೊತೆಗೆ ಸೋಂಕು ತಡೆಗಟ್ಟುವಿಕೆ ಕುರಿತು ಆರೋಗ್ಯ ಶಿಬಿರ, ಯೋಗ ಕಾರ್ಯಕ್ರಮ, ಜಾಗೃತಿ ಉಪನ್ಯಾಸಗಳನ್ನು ಸಂಘದಿಂದ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.
‘ವೈದ್ಯರು ವೈದ್ಯಕೀಯ ತಂತ್ರಜ್ಞಾನ ಮತ್ತು ನಾವಿನ್ಯತೆಯ ಉಪಚಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಕೈಗೊಳ್ಳಲಾಗುದು’ ಎಂದು ಅಧ್ಯಕ್ಷ ಅನಿಲ ಪಾಟೀಲ ತಿಳಿಸಿದರು.
ಡಾ.ವೈಶಾಲಿ ದೇಶಪಾಂಡೆ ಪ್ರಾರ್ಥಿಸಿದರು. ಡಾ.ಮಿಲಿಂದ ಹಲಗೇಕರ ಸ್ವಾಗತಿಸಿದರು. ಡಾ.ರಾಜಶ್ರೀ ಅನಗೋಳ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.