ಬೆಳಗಾವಿ: ಸೊಸೈಟಿ ಹಣ ದುರುಪಯೋಗ ಹಾಗೂ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದ ಹಿಂದಿನ ಕಾರ್ಯದರ್ಶಿ ಶುಕ್ರವಾರ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾರೆ.
ಖಾನಾಪುರ ತಾಲ್ಲೂಕು ಗಂದಿಗವಾಡದ ಮಹಾಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಹಿಂದಿನ ಕಾರ್ಯದರ್ಶಿ ಶೀತಲ ಬಡಸದ ಶಿಕ್ಷೆಗೆ ಗುರಿಯಾದವರು.
‘ಸೊಸೈಟಿಗೆ ಸೇರಿದ ₹ 5.39 ಲಕ್ಷ. ದುರುಪಯೋಗ ಪಡಿಸಿಕೊಂಡಿದ್ದರು. ಅಲ್ಲದೆ, ಸಾಲದ ರೂಪದಲ್ಲಿ ಪಡೆದ ₹ 1.90 ಲಕ್ಷ ಹಣ ಮರಳಿಸಿರಲಿಲ್ಲ. ಅವರು ನೀಡಿದ್ದ ಚೆಕ್ಗಳು ಅಮಾನ್ಯವಾಗಿದ್ದವು. ಹಾಗಾಗಿ ಸೊಸೈಟಿ ಆಡಳಿತ ಮಂಡಳಿ ಬೆಳಗಾವಿಯ 8ನೇ ಜೆಎಂಎಫ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಶೆಮೀದಾ 2021ರ ಜು.16ರಂದು ನೀಡಿದ ತೀರ್ಪಿನಲ್ಲಿ ಆರೋಪಿಯು ₹ 4.75 ಲಕ್ಷ ಮತ್ತು ₹ 3.20 ಲಕ್ಷ ದಂಡವಾಗಿ ತುಂಬಬೇಕು. ತಪ್ಪಿದಲ್ಲಿ ಎರಡೂ ಪ್ರಕರಣಗಳಲ್ಲಿ ತಲಾ 5 ತಿಂಗಳು ಜೈಲು ಶಿಕ್ಷೆಯ ಆದೇಶವನ್ನು ನ್ಯಾಯಾಲಯ ವಿಧಿಸಿತ್ತು.
‘ಆದರೆ, ಶೀತಲ ದಂಡ ಪಾವತಿಸದ್ದರಿಂದ ತಿಲಕವಾಡಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರಿಂದ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಎರಡು ಪ್ರಕರಣದಲ್ಲಿ ತಲಾ 5 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ’ ಎಂದು ಸೊಸೈಟಿ ಪರವಾಗಿ ವಾದ ಮಂಡಿಸಿದ ಸುನೀಲ ಸಾಣಿಕೊಪ್ಪ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.