ADVERTISEMENT

ಬೆಳಗಾವಿ | 'ಇಂಟರ್ನೆಟ್‌ ಸಂಪರ್ಕ: ಎಚ್ಚರ ತಪ್ಪಬೇಡಿ'

ಪರಸ್ಪರ ಸಮನ್ವಯದೊಂದಿಗೆ ಚಳಿಗಾಲ ಅಧಿವೇಶನದ ಕಾರ್ಯನಿರ್ವಹಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 1:58 IST
Last Updated 6 ಡಿಸೆಂಬರ್ 2025, 1:58 IST
ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಶಿಂಧೆ ಚಳಿಗಾಲದ ಅಧಿವೇಶನ ಸಿದ್ಧತೆ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು
ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಶಿಂಧೆ ಚಳಿಗಾಲದ ಅಧಿವೇಶನ ಸಿದ್ಧತೆ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು   

ಬೆಳಗಾವಿ: ‘ಅಧಿವೇಶನ ಸಂದರ್ಭದಲ್ಲಿ ಸುವರ್ಣಸೌಧ, ಅಧಿಕಾರಿಗಳ ಕಚೇರಿ ಹಾಗೂ ನಿವಾಸದ ಸ್ಥಳಗಳಲ್ಲಿ ಅಗತ್ಯ ಸೌಕರ್ಯಗಳನ್ನು ನೀಡಬೇಕು. ಮುಖ್ಯವಾಗಿ ಕಂಪ್ಯೂಟರ್‌ ಕೇಂದ್ರ, ಇಂಟರ್ನೆಟ್‌ ಸಂಪರ್ಕ ಸೂಕ್ತವಾಗಿ ಇರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೂಚಿಸಿದರು.

ಅಧಿವೇಶನ ಹಿನ್ನೆಲೆಯಲ್ಲಿ ಶುಕ್ರವಾರ ವಿವಿಧ ಉಪಸಮಿತಿಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ಆದ ಸಣ್ಣಪುಟ್ಟ ಸಮಸ್ಯೆಗಳು ಈ ಬಾರಿ ಮರುಕಳಿಸದಂತೆ ನೋಡಿಕೊಳ್ಳಿ. ಶ್ರದ್ಧೆಯಿಂದ ಕೆಲಸ ಮಾಡಿ’ ಎಂದರು.

‘ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಕೊಠಡಿಯಲ್ಲಿ ಯಾವುದೇ ಸಾಮಗ್ರಿಗಳು ಕಡಿಮೆ ಆಗದಂತೆ ಕ್ರಮವಹಿಸುವುದು. ಸಂಪರ್ಕಾಧಿಕಾರಿಯಾಗಿ ನೇಮಕಗೊಂಡ ಅಧಿಕಾರಿಗಳು ತಮಗೆ ಸಂಬಂಧಿಸಿದ ಇಲಾಖೆ ಹಾಗೂ ಸಚಿವಾಲಯದ ಅಧಿಕಾರಿಗಳ ಪ್ರವಾಸ ಕಾರ್ಯಕ್ರಮದ ಪಟ್ಟಿ ಕುರಿತು ಅವರ ಆಪ್ತ ಸಹಾಯಕರ ಮೂಲಕ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಹೊಟೇಲ್‌ಗಳಲ್ಲಿ ವಸತಿ ವ್ಯವಸ್ಥೆಗೆ ಹಂಚಿಕೆಯಾದ ಕೊಠಡಿಗಳಲ್ಲಿ ಮುಂಚಿತವಾಗಿ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು. ಎಲ್ಲ ಸಂಪರ್ಕಾಧಿಕಾರಿಯಾಗಿ ನಿಯೋಜನೆಗೊಂಡ ಅಧಿಕಾರಿಗಳು ಕಡ್ಡಾಯವಾಗಿ ಇಂಟರ್ನೆಟ್ ಸಂಪರ್ಕಕ್ಕಾಗಿ ಸ್ವತಃ ಡೊಂಗಲ್ ವ್ಯವಸ್ಥೆ ಮಾಡಿಕೊಂಡು ಮೇಲಧಿಕಾರಿಗಳು ಕೇಳಿದಾಗ ಅವರಿಗೆ ಒದಗಿಸಬೇಕು’ ಎಂದೂ ಸೂಚಿಸಿದರು.

ADVERTISEMENT

‘ತಮ್ಮ–ತಮ್ಮ ಕೊಠಡಿಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ್‌ ಮತ್ತು ಪ್ರಿಂಟರ್‌ಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು. ನಿರ್ವಹಣೆಯಲ್ಲಿ ಯಾವುದಾದರೂ ಲೋಪ ಕಂಡುಬಂದಿದಲ್ಲಿ ನಿಯೋಜಿತ ತಾಂತ್ರಿಕ ಸಹಾಯಕರ ಸಂಪರ್ಕ ಮಾಡಬೇಕು. ಅಧಿವೇಶನ ಕಾರ್ಯಕ್ಕೆ ಆಗಮಿಸಿದ ಇಲಾಖೆ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯಲ್ಲಿನ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳ ಕ್ಷೇತ್ರ ಭೇಟಿ ನೀಡಲು ಇಚ್ಛಿಸಿದಲ್ಲಿ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದೂ ತಿಳಿಸಿದರು.

‘ಎಲ್ಲ ಅಧಿಕಾರಿಗಳು ಮೇಲಧಿಕಾರಿಗಳ ದೂರವಾಣಿ ಕರೆಗಳಿಗೆ ಸರಿಯಾಗಿ ಸ್ಪಂದಿಸಬೇಕು. ಯಾವುದಾದರು ಸಮಸ್ಯೆ ಬಂದಿದ್ದಲಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಗೂ ಯೋಜನಾ ನಿರ್ದೇಶಕರಿಗೆ ನೇರವಾಗಿ ಸಂಪರ್ಕಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಬಸವರಾಜ ಹೆಗ್ಗನಾಯಕ, ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ, ಕಚೇರಿ ವ್ಯವಸ್ಥಾಪಕ ಬಸವರಾಜ ಮುರಘಾಮಠ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಎಲ್ಲ ಅಧಿಕಾರಿಗಳೂ ತಮ್ಮ ತಂಡದೊಂದಿಗೆ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಲೋಪ ಕಂಡುಬಂದರೆ ಹೊಣೆ ಹೊತ್ತವರನ್ನೂ ಗುರಿ ಮಾಡಲಾಗುವುದು

-ರಾಹುಲ್‌ ಶಿಂಧೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.