ADVERTISEMENT

ಮೃತರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:41 IST
Last Updated 20 ಅಕ್ಟೋಬರ್ 2020, 15:41 IST

ಬೆಳಗಾವಿ: ಸದಾ ಕಾಲ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರ ಕಲ್ಯಾಣಕ್ಕಾಗಿ ಸ್ಥಾಪಿಸಿರುವ ಬೆಳಗಾವಿ ಪತ್ರಕರ್ತರ ಸಂಘವನ್ನು ಮತ್ತಷ್ಟು ಬಲಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ಇನ್ನಿತರ ನಿರ್ಧಾರವನ್ನು ಕೈಗೊಳ್ಳಲಾಯಿತು.

ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಭವನದಲ್ಲಿ ಮಂಗಳವಾರ ನಡೆದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಚರ್ಚಿಸಲಾಯಿತು.

‘ಕೋವಿಡ್‌ನಿಂದ ಬಾಧಿತವಾಗಿರುವ ಹಾಗೂ ಬಲಿಯಾಗಿರುವ ಪತ್ರಕರ್ತರ ಚಿಕಿತ್ಸಾ ವೆಚ್ಚ ಹಾಗೂ ಕನಿಷ್ಠ ₹ 30 ಲಕ್ಷ ಪರಿಹಾರ ನೀಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

ADVERTISEMENT

ಜಿಲ್ಲೆಯಾದ್ಯಂತ ಸಂಘದ ಕಾರ್ಯಚಟುವಟಿಕೆ ವಿಸ್ತರಿಸಿ, ತಾಲ್ಲೂಕು ಘಟಕಗಳನ್ನು ಸ್ಥಾಪಿಸುವುದು ಹಾಗೂ ಸದಸ್ಯತ್ವ ಮಾಡಿಕೊಳ್ಳುವುದು, ಪ್ರತಿ ವರ್ಷ ಅತ್ಯುತ್ತಮ ಪತ್ರಕರ್ತ ಹಾಗೂ ಛಾಯಾಗ್ರಾಹಕರನ್ನು ಗುರುತಿಸಿ ಗೌರವಿಸಲು ನಿರ್ಧರಿಸಲಾಯಿತು. 2019–20ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಸಂಘದ ಖರ್ಚು– ವೆಚ್ಚಗಳ ವರದಿ ಮಂಡಿಸಲಾಯಿತು.

ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ, ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಕನ್ನಡ ಹೋರಾಟಗಾರ ಶಶಿಧರ ಘೀವಾರಿ, ಮಾಜಿ ಶಾಸಕ ಬಿ.ಐ. ಪಾಟೀಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಧ್ಯಕ್ಷ ಶ್ರೀಶೈಲ ಮಠದ, ಉಪಾಧ್ಯಕ್ಷ ಮಹೇಶ ವಿಜಾಪೂರ, ಕೋಶಾಧ್ಯಕ್ಷ ರಾಯಣ್ಣ ಆರ್.ಸಿ., ಕಾರ್ಯಾಧ್ಯಕ್ಷರಾದ ಕುಂತಿನಾಥ ಕಲಮನಿ, ಮಲ್ಲಿಕಾರ್ಜುನ ಮುಗಳಿ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಖಜಾಂಚಿಗಳಾದ ಮಂಜುನಾಥ ಕೋಳಿಗುಡ್ಡ, ಭರಮಗೌಡ ಪಾಟೀಲ, ಕಾನೂನು ಸಲಹೆಗಾರ ರವೀಂದ್ರ ತೋಟಗೇರ, ಸದಸ್ಯರಾದ ಕೀರ್ತಿ ಕಾಸರಗೂಡು, ರಾಜಶೇಖರ ಹಿರೇಮಠ, ಹೀರಾ ಕಂಗ್ರಾಳ, ಅಶೋಕ ಮುದ್ದಣ್ಣವರ, ಸದಸ್ಯರಾದ ಗೋಪಾಲ ಖಟಾವಕರ, ಅಶೋಕ ಮಗದುಮ್ಮ, ಮಾಲತೇಶ ಮಟಿಗೇರ, ವಿಠ್ಠಲ ಬಾಳೇಕುಂದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.