ADVERTISEMENT

ಬೆಳಗಾವಿ: ಹೊಸ ಕನ್ನಡ ಧ್ವಜ ಅಳವಡಿಸಲು ಮುಂದಾದ ಹೋರಾಟಗಾರರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 12:22 IST
Last Updated 5 ಜುಲೈ 2021, 12:22 IST
ಬೆಳಗಾವಿಯ ಮಹಾನಗರಪಾಲಿಕೆ ಎದುರಿನ ಧ್ವಜಸ್ತಂಭದಲ್ಲಿ ಹೊಸ ಕನ್ನಡ ಬಾವುಟ ಅಳವಡಿಸುವಂತೆ ಆಗ್ರಹಿಸಿ ಹೋರಾಟಗಾರರು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಮಹಾನಗರಪಾಲಿಕೆ ಎದುರಿನ ಧ್ವಜಸ್ತಂಭದಲ್ಲಿ ಹೊಸ ಕನ್ನಡ ಬಾವುಟ ಅಳವಡಿಸುವಂತೆ ಆಗ್ರಹಿಸಿ ಹೋರಾಟಗಾರರು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರಿನ ಧ್ವಜಸ್ತಂಭದಲ್ಲಿರುವ ಕನ್ನಡ ಬಾವುಟವನ್ನು ಬದಲಿಸಿ ಹೊಸದನ್ನು ಅಳವಡಿಸಲು ಮುಂದಾದ 10 ಮಂದಿ ಕನ್ನಡ ಹೋರಾಟಗಾರರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದರು.

ಧ್ವಜವನ್ನು ಕನ್ನಡ ಹೋರಾಟಗಾರರೇ ಹೋದ ವರ್ಷದ ಡಿ.28ರಂದು ಸ್ಥಾಪಿಸಿದ್ದರು. ಬಾವುಟದ ಬಣ್ಣ ಮಾಸಿ ಹೋಗಿರುವುದರಿಂದ ಹೊಸದು ಹಾಕಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ತಾವಾಗಿಯೇ ಬಾವುಟದೊಂದಿಗೆ ಬಂದು ಅಳವಡಿಸಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ಕೊಡದಿದ್ದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅವರೊಂದಿಗೆ ವಾಗ್ವಾದ ನಡೆಸಿದರು.

‘ಮೂರು ತಿಂಗಳುಗಳಿಂದ ಮನವಿ ಮಾಡುತ್ತಿದ್ದರೂ ಹೊಸ ಕನ್ನಡ ಬಾವುಟ ಹಾಕುತ್ತಿಲ್ಲ. ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿಯೇ ಈ ರೀತಿ ನಡೆದುಕೊಳ್ಳುತ್ತಿದೆ’ ಎಂದು ಹೋರಾಟಗಾರರಾದ ಶ್ರೀನಿವಾಸ ತಾಳೂಕರ ಮತ್ತು ವಾಜೀದ ಹಿರೇಕೂಡಿ ದೂರಿದರು.

ADVERTISEMENT

ಹಗ್ಗ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ, ‘ಹೊಸ ಕನ್ನಡ ಧ್ವಜ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ನೀವು ತೆರಳಿರಿ’ ಎಂದು ತಿಳಿಸಿದರು. ಆಗ ಹೋರಾಟಗಾರರು ಅಧಿಕಾರಿ ಜೊತೆ ವಾಗ್ವಾದ ನಡೆಸಿದರು. ಭರವಸೆ ಬೇಡ ಕೂಡಲೇ ಧ್ವಜ ಬದಲಾಯಿಸಬೇಕು ಎಂದು ಪಟ್ಟು ಹಿಡಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಮುಂಜಾಗ್ರತಾ ಕ್ರಮವಾಗಿ ಧ್ವಜಸ್ತಂಭ ಸುತ್ತ ಬ್ಯಾರಿಕೇಡ್‌ಗಳನ್ನು ಇಟ್ಟು, ಪೊಲೀಸ್‌ ಭದ್ರತೆ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.