ADVERTISEMENT

ಹಿಂಡಲಗಾ ಜೈಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕೈದಿಗಳಿಗೆ ಸಾಹಿತ್ಯ ಕಮ್ಮಟ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 13:54 IST
Last Updated 19 ಜೂನ್ 2025, 13:54 IST
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರಾಗೃಹ ವಾಸಿಗಳಿಗೆ ಸಾಹಿತ್ಯ ಕಮ್ಮಟದಲ್ಲಿ ಎಲ್.ಎನ್‌‌.ಮುಕುಂದರಾಜ್ ಮಾತನಾಡಿದರು
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರಾಗೃಹ ವಾಸಿಗಳಿಗೆ ಸಾಹಿತ್ಯ ಕಮ್ಮಟದಲ್ಲಿ ಎಲ್.ಎನ್‌‌.ಮುಕುಂದರಾಜ್ ಮಾತನಾಡಿದರು   

ಬೆಳಗಾವಿ: ‘ಜೈಲುಗಳಿಗೆ ಬಂದವರೆಲ್ಲ ಬದಲಾಗಬೇಕೆಂಬ ಉದ್ದೇಶದಿಂದ ಸಾಹಿತ್ಯ ಕಮ್ಮಟ ಏರ್ಪಡಿಸಿದ್ದೇವೆ. ಹೀಗಾಗಿ ಜೈಲುಗಳು ಪರಿವರ್ತನಾ ಶಾಲೆಗಳಾಗಿವೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದರು.

ಇಲ್ಲಿನ ಹಿಂಡಲಗಾ ಜೈಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರಾಗೃಹ ವಾಸಿಗಳಿಗೆ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ಕಲಿತ ವಿದ್ಯಾಭ್ಯಾಸವನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಹಾಗೆ ಸದ್ಬಳಕೆ ಮಾಡಿಕೊ‌ಂಡಿದ್ದರೆ ಜೈಲೊಳಗೆ ಬರುತ್ತಿರಲಿಲ್ಲ. ಇದರೊಂದಿಗೆ ಕನ್ನಡ ಸಾಹಿತ್ಯ ಓದದೇ ಇದ್ದರೆ ನಮ್ಮ ಜನ್ಮ ವ್ಯರ್ಥ. ಓದುವ ಹವ್ಯಾಸ ಬೆಳೆಸಿಕೊಳ್ಳಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

‘ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು ಕಟ್ಟಿದ ಹಿಂಡಲಗಾ ಜೈಲಿನ ಪರಂಪರೆ ದೊಡ್ಡದು. ವರಕವಿ ದ.ರಾ. ಬೇಂದ್ರೆ ಅವರು ಕವಿತೆಯೊಂದನ್ನು ಬರೆದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ಹಿಂಡಲಗಾ ಜೈಲಿಗೆ ಹಾಕಿತು. ಸಾವರ್ಕರ್ ಕೂಡ ಹಿಂಡಲಗಾ ಜೈಲಿನಲ್ಲಿದ್ದರು. ಕಾದಂಬರಿಕಾರ ಬಸವರಾಜ ಕಟ್ಟೀಮನಿ ಅವರು ಇದೇ ಜೈಲಿನಲ್ಲಿದ್ದ ಇತಿಹಾಸವಿದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ‘ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಹಿತ್ಯ ಸಂಗಾತಿ ಆಗಬೇಕು. ಏಕೆಂದರೆ ಎಂಬಿಬಿಎಸ್ ಓದಿದ ನಂತರ ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಐಪಿಎಸ್ ಪಾಸ್ ಆದೆ’ ಎಂದರು.

ಪತ್ರಕರ್ತ ಸರಜೂ ಕಾಟ್ಕರ್ ಮಾತನಾಡಿದರು. ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್, ಕಾರಾಗೃಹದ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ, ಜೈಲರ್‌ಗಳಾದ ರಾಜೇಶ ಧರ್ಮಟ್ಟಿ, ಬಸವರಾಜ ಭಜಂತ್ರಿ, ರಮೇಶ ಕಾಂಬಳೆ ಹಾಗೂ ಎಫ್.ಟಿ. ದಂಡೈನವರ ಇದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಮೈತ್ರೇಯಿಣಿ ಗದಿಗೆಪ್ಪಗೌಡರ, ಸಾಹಿತ್ಯ ಕಮ್ಮಟ ಸಂಚಾಲಕ ಗಣೇಶ ಅಮೀನಗಡ, ಶಿಕ್ಷಕ ಶಶಿಕಾಂತ ಯಾದಗುಡೆ ಇದ್ದರು.

ಕೈದಿಗಳಾದ ಅರುಣಕುಮಾರ ಲಮಾಣಿ, ಮಹಾಂತೇಶ ಹೊಂಗಲ, ಪ್ರಿಯಾಂಕಾ ಜಗಮುತ್ತಿ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.