ಬೆಳಗಾವಿ ಸುವರ್ಣ ಸೌಧ
ಬೆಳಗಾವಿ: ‘ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ಮಾಡಲು ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಅನುಮತಿ ಕೊಡಬೇಕು. ಇಲ್ಲದಿದ್ದರೆ, ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿ ಪ್ರತಿಭಟಿಸುತ್ತೇವೆ. ಕರ್ನಾಟಕದಿಂದ ಬರುವ ವಾಹನಗಳು ಮಹಾರಾಷ್ಟ್ರ ಪ್ರವೇಶಿಸದಂತೆ ತಡೆಯುತ್ತೇವೆ’ ಎಂದು ಶಿವಸೇನೆ ಉದ್ಧವ್ ಠಾಕ್ರೆ ಗುಂಪಿನ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಕೊಲ್ಹಾಪುರ ಜಿಲ್ಲಾಧಿಕಾರಿ ಸಂಜಯ ಶಿಂಧೆ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿರುವ ಅವರು, ‘ಮೂರು–ನಾಲ್ಕು ವರ್ಷಗಳಿಂದ ಬೆಳಗಾವಿಯಲ್ಲಿ ಮಹಾಮೇಳಾವ್ ಮಾಡಲು ಬೆಳಗಾವಿ ಜಿಲ್ಲಾಡಳಿತ ಅನುಮತಿ ಕೊಡುತ್ತಿಲ್ಲ. ಮಹಾರಾಷ್ಟ್ರದ ಜನಪ್ರತಿನಿಧಿಗಳಿಗೆ ಅಲ್ಲಿಗೆ ಬರಲು ಬಿಡುತ್ತಿಲ್ಲ’ ಎಂದು ದೂರಿದ್ದಾರೆ.
‘ಅಧಿವೇಶನ ವೇಳೆ ಕರ್ನಾಟಕದ ಜನಪ್ರತಿನಿಧಿಗಳು ಮಹಾರಾಷ್ಟ್ರಕ್ಕೂ ಭೇಟಿ ಕೊಡುತ್ತಾರೆ. ಮಹಾಮೇಳಾವ್ಗೆ ಅನುಮತಿ ಸಿಗದಿದ್ದರೆ, ಅವರೂ ಮಹಾರಾಷ್ಟ್ರಕ್ಕೆ ಬಾರದಂತೆ ತಡೆಯಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.
ಮುಖಂಡರಾದ ಸಂಜಯ ಪವಾರ, ವಿಜಯ ದೇವಣೆ, ವಿಶಾಲ ದೇವಕುಳೆ, ಧನಾಜಿ ಜವಳಿ ಅವರು ಮನವಿಪತ್ರಕ್ಕೆ ಸಹಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.