ಖಾನಾಪುರ: ತಾಲ್ಲೂಕಿನಲ್ಲಿ ಕಳೆದ ಭಾನುವಾರದಿಂದ ಸುರಿಯಲಾರಂಭಿಸಿದ್ದ ಮಳೆಯ ರಭಸ ಬುಧವಾರ ಕ್ಷೀಣಿಸಿದೆ.
ತಾಲ್ಲೂಕಿನ ಪಶ್ಚಿಮ ಘಟ್ಟದ ಕಾಡಿನಲ್ಲಿ ಕಳೆದ ಹಲವು ದಿನಗಳಿಂದ ಸುರಿದ ಮಳೆಯ ಪರಿಣಾಮ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳು ಮತ್ತು ಕೋಟ್ನಿ, ಪಣಸೂರಿ, ಕಳಸಾ, ಕುಂಬಾರ, ನಿಟ್ಟೂರ, ಹಾಲಾತ್ರಿ, ಭಂಡೂರಿ, ಮಂಗೇತ್ರಿ ಹಳ್ಳಗಳಲ್ಲಿ ನೀರು ರಭಸದಿಂದ ಹರಿಯುತ್ತಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ದೇವಲತ್ತಿ, ಪಾರಿಶ್ವಾಡ, ನಂದಗಡ, ಮಂಗೇನಕೊಪ್ಪ, ಗಂದಿಗವಾಡ, ನಾಗರಗಾಳಿ, ಭುರಣಕಿ, ಬೀಡಿ, ಹಲಸಿ, ಲೋಂಡಾ, ಕಕ್ಕೇರಿ, ಪ್ರಭುನಗರ, ಜಾಂಬೋಟಿ, ಕಣಕುಂಬಿ, ಬೈಲೂರು ಭಾಗಗಳಲ್ಲಿ ಮಂಗಳವಾರ ರಾತ್ರಿ ಕೆಲಕಾಲ ದಪ್ಪ ಹನಿಗಳೊಂದಿಗೆ ಮಳೆಯಾಗಿದ್ದು, ಅಸೋಗಾ, ಶಿರೋಲಿ, ಕಣಕುಂಬಿ, ಜಾಂಬೋಟಿ, ನಾಗರಗಾಳಿ, ಹೆಮ್ಮಡಗಾ ಮತ್ತು ಲೋಂಡಾ ಭಾಗದಲ್ಲಿ ಬುಧವಾರ ಮುಂಜಾನೆ ಕೆಲಕಾಲ ತುಂತುರು ಮಳೆ ಸುರಿದಿದೆ. ಉಳಿದಂತೆ ತಾಲ್ಲೂಕಿನಾದ್ಯಂತ ದಿನವಿಡೀ ಮೋಡ ಕವಿದ ವಾತಾವರಣವಿದೆ.
ಗಾಡಿಕೊಪ್ಪ, ಕಾಮಶಿನಕೊಪ್ಪ, ಕರವಿನಕೊಪ್ಪ, ಇಟಗಿ, ಹಿರೇಮುನವಳ್ಳಿ, ಕೊಡಚವಾಡ, ಅವರೊಳ್ಳಿ, ಚಾಪಗಾಂವ, ಮುಗಳಿಹಾಳ ಮತ್ತು ಸುತ್ತಲಿನ ಭಾಗದಲ್ಲಿ ಜಿಟಿಜಿಟಿ ಮಳೆಯಾಗಿದೆ. ಇತ್ತೀಚಿನ ಸತತ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬಹುತೇಕ ಸೇತುವೆಗಳು ಬುಧವಾರ ಮುಂಜಾನೆಯಿಂದ ಸಂಚಾರಕ್ಕೆ ಮುಕ್ತವಾಗಿವೆ. ಅರಣ್ಯಪ್ರದೇಶದ ವಿವಿಧೆಡೆ ಸ್ಥಗಿತಗೊಂಡಿದ್ದ ವಿದ್ಯುತ್ ಸರಬರಾಜು ಮತ್ತೆ ಆರಂಭಗೊಂಡಿದೆ. ಸತತಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜಸ್ಥಿತಿಗೆ ಮರಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.