ADVERTISEMENT

ಜಾರಕಿಹೊಳಿ, ಡಿಕೆ ಸಹೋದರರ ಮಧ್ಯೆ ಪೈಪೋಟಿಯಿಲ್ಲ: ಬಾಲಚಂದ್ರ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:36 IST
Last Updated 23 ಜೂನ್ 2025, 14:36 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಳಗಾವಿ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಸಹೋದರರು ಮತ್ತು ಜಾರಕಿಹೊಳಿ ಸಹೋದರರ ಮಧ್ಯೆ ಪೈಪೋಟಿ ಇದೆ ಎಂಬುದನ್ನು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಬೆಮುಲ್‌) ಅಧ್ಯಕ್ಷ, ಶಾಸಕ  ಬಾಲಚಂದ್ರ ಜಾರಕಿಹೊಳಿ ಅಲ್ಲಗೆಳೆದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್‌ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬೆಮುಲ್‌ನಲ್ಲಿ ಕ್ರಿಯಾಶೀಲವಾಗಿದ್ದಾರೆ.

ಸದ್ಯ ಕೆಎಂಎಫ್‌ನ ವಾರ್ಷಿಕ ವಹಿವಾಟು ₹20 ಸಾವಿರ ಕೋಟಿ ಇದೆ. ಅಧ್ಯಕ್ಷ ಭೀಮಾ ನಾಯಕ ಅವರ ಅವಧಿ ಇನ್ನೆರಡು ತಿಂಗಳಲ್ಲಿ ಮುಗಿಯಲಿದ್ವು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ADVERTISEMENT

ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಈಚೆಗೆ ಅವಿರೋಧ ಆಯ್ಕೆಯಾಗಿದ್ದಾರೆ. ಕೆಎಂಎಫ್‌ ಅಧ್ಯಕ್ಷರಾಗುವ ದೂರದೃಷ್ಟಿಯಿಂದ ಸುರೇಶ್‌ ಅವರು ಬಮೂಲ್‌ಗೆ ಬಂದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

‘ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಜಾರಕಿಹೊಳಿ ಸಹೋದರರು– ಡಿಕೆ ಸಹೋದರರ ಮಧ್ಯೆ ಪೈಪೋಟಿ ನಡೆದಿದೆ ಎಂಬುದು ಗಾಳಿ ಸುದ್ದಿ. ನಾನು ಸುರೇಶ್ ಎದುರಾಳಿ ಎಂಬಂತೆ ಬಿಂಬಿಸಬಾರದು. ನಾನು ನಿರ್ದೇಶಕ ಮಾತ್ರ ಆಗುತ್ತೇನೆ. ಯಾರು ಅಧ್ಯಕ್ಷರಾಗುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ಸ್ಪರ್ಧಿಸುವುದಿಲ್ಲ. ಅದರ ನಿರೀಕ್ಷೆಯೂ ಇಲ್ಲ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ‘‌ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆಯೋ, ಅದರ ಪ್ರತಿನಿಧಿಗೆ ಅಧಿಕಾರ ಸಿಗುವುದು ಸಹಜ. ಕೆಎಂಎಫ್, ಅಪೆಕ್ಸ್ ಬ್ಯಾಂಕ್, ಮಾರ್ಕೆಟಿಂಗ್ ಫೆಡರೇಷನ್‌ಗಳ ಗಾದಿ ಆಯಾ ಪಕ್ಷದವರಿಗೇ ಸಿಗುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.